ನಗರದಲ್ಲಿ ಹಾಡುಹಗಲೇ 3 ಮಹಿಳೆಯರ ಕೊಲೆ
ಬೆಂಗಳೂರು, ಜ. 20 : ಇತ್ತೀಚೆಗೆ ಜಯನಗರ 3 ನೇ ಬ್ಲಾಕ್ ನಲ್ಲಿ ವೃದ್ಧ ದಂಪತಿಗಳ ಜೋಡಿ ಕೊಲೆ ನಡೆದಿರುವ ಬೆನ್ನಲ್ಲೇ ಇಂದು ದಿಂಬಿನಿಂದ ಉಸಿರು ಗಟ್ಟಿಸಿ ಮೂವರು ಮಹಿಳೆಯರನ್ನು ಕೊಲೆ ಮಾಡಿರುವ ಘಟನೆ ತಿಲಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ 4 ನೇ ಟಿ ಬ್ಲಾಕ್ ನ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ.
ತಾಯಿ ಸುಭದ್ರಮ್ಮ (80), ಮಗಳು ವಿಜಯಲಕ್ಷ್ಮಿ (59) ಹಾಗೂ ಸೊಸೆ ಜಯಶ್ರೀ ಮಂಜುನಾಥ್ (50) ಎಂಬುವವರು ಮೃತಪಟ್ಟ ದುರ್ದೈವಿಗಳು. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುತ್ತಿದ್ದು ಪರಿಶೀಲನೆ ನಡೆಸಬೇಕಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ಈ ಕೊಲೆಗಳು ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ.
ಇತ್ತೀಚೆಗೆ ಜಯನಗರದ 3 ನೇ ಬ್ಲಾಕ್ ನಲ್ಲಿದ್ದ ವೃದ್ಧ ದಂಪತಿಗಳನ್ನು ಹತ್ಯೆಗೈಯಲಾಗಿತ್ತು. ಇದರ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇಂದು ಮತ್ತೆ ಮೂವರು ಮಹಿಳೆಯರ ಕೊಲೆ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ. ಬೆಂಗಳೂರು ನಗರದಲ್ಲಿ ಕೊಲೆ, ಸುಲಿಗೆ, ದರೋಡೆ, ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಅವ್ಯಾಹತವಾಗಿ ನಡೆಯತೊಡಗಿವೆ.
(ದಟ್ಸ್ ಕನ್ನಡ ವಾರ್ತೆ)