ಬಸ್ಸಿಗೆ ಬೆಂಕಿ, ರಾಜ್ಯಾದ್ಯಂತ ಕರವೇ ಪ್ರತಿಭಟನೆ
ಬೆಂಗಳೂರು, ಜ. 20 : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ನಡೆಸುತ್ತಿರುವ ಪುಂಡಾಟಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಹಾಗೂ ಖಂಡನೆ ವ್ಯಕ್ತವಾಗತೊಡಗಿದೆ.
ಮಹಾರಾಷ್ಟ್ರಕ್ಕೆ ಸೇರಿದ ಬಸ್ ಗಳು ಜಖಂ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮೇಲೆ ಕರವೇ ಕಾರ್ಯಕರ್ತರ ದಾಳಿ ಹಾಗೂ ಚಾಮರಾಜನಗರದಲ್ಲಿ ಕನ್ನಡ ಕಸ್ತೂರಿ ಸಂಘ ಹಾಗೂ ಬಿಜಾಪುರದಲ್ಲಿ ಜಯಕರ್ನಾಟಕ ಕಾರ್ಯಕರ್ತರು ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಬೀದರ್ ಜಿಲ್ಲೆಯ ಔರಾದ್ ನಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತರು ಎಂಇಎಸ್ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಆಫ್ ಮಹಾರಾಷ್ಟ್ರ ಪುಡಿ ಪುಡಿ
ಧಾರವಾಡದಲ್ಲಿ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಗರದ ರೀಗಲ್ ಚಿತ್ರಮಂದಿರ ಬಳಿ ಇರುವ ಬ್ಯಾಂಕ್ ಆಫ್ ಮಹಾರಾಷ್ಟ್ರದೊಳಗೆ ನುಗ್ಗಿದ ಕನ್ನಡ ಪರ ಕಾರ್ಯಕರ್ತರು ಪಿಠೋಪಕರಣಗಳನ್ನು ಧ್ವಂಸಗೊಳಿಸಿದರು. ಬ್ಯಾಂಕ್ ನಲ್ಲಿರುವ ಬೆಲೆ ಬಾಳುವ ಕಂಪ್ಯೂಟರ್ ಗಳು, ಕ್ಯಾಶ್ ಕೌಂಟರ್ ನ ಗ್ಲಾಸ್, ಕಿಟಿಕಿ, ಖುರ್ಚಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿಗಟ್ಟಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು.
ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಯಾವ ಕಾರಣಕ್ಕೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ. ಎಂಇಎಸ್ ಹಾಗೂ ಶಿವಸೇನೆಯ ಕಿಡಿಗೇಡಿಗಳು ಪದೇಪದೆ ಗಡಿಗೆ ಸಂಬಂಧಿಸಿ ತಗಾದೆ ತೆಗೆಯುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಸೋಮವಾರ ಮಹಾರಾಷ್ಟ್ರದ ಲಾತೂರ್ ನಲ್ಲಿ ರಾಜ್ಯದ ಬಸ್ ಗೆ ಬೆಂಕಿ ಹಾಗೂ ಇಂದು ಕೊಲ್ಲಾಪುರದಲ್ಲಿ ರಸ್ತೆ ಸಾರಿಗೆ ಬಸ್ ಮೇಲೆ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಉಗ್ರವಾಗಿ ಖಂಡಿಸಿದರು. ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಇದೇ ರೀತಿ ಹಿಂಸಾಚಾರ ಮುಂದುವರೆಸಿದರೆ ಸುಮ್ಮನೇ ಕೂರಲು ಸಾಧ್ಯವಿಲ್ಲ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಕಳೆದ ಅನೇಕ ವರ್ಷಗಳಿಂದ ಕರ್ನಾಟಕದೊಂದಿಗೆ ಗಡಿ ತಂಟೆ ಮಾಡುತ್ತಿರುವ ಎಂಇಎಸ್ ಮತ್ತು ಶಿವಸೇನೆ ಖಂಡಿಸಿ ಬೆಳಗಾವಿಯ ಹುಕ್ಕೇರಿ ಹಾಗೂ ಸಂಕೇಶ್ವರ ಮಧ್ಯದಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರಕ್ಕೆ ಸೇರಿದ ಬಸ್ ಮೇಲೆ ದಾಳಿ ನಡೆಸಿದ ಕನ್ನಡ ಕಾರ್ಯಕರ್ತರು ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿ ಸಂಪೂರ್ಣ ಜಖಂಗೊಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ನಿಲ್ಲದ ಶಿವಸೇನೆಯ ಪುಂಡಾಟಿಕೆ
ಲಾತೂರ್ ನಲ್ಲಿ ರಾಜ್ಯದ ಬಸ್ ಗೆ ಬೆಂಕಿ











Click it and Unblock the Notifications