ಭಗವಾಧ್ವಜ ಮುಟ್ಟಿದರೆ ಕೈ ಕಟ್ : ರಾಮದಾಸ್
ಬೆಂಗಳೂರು, ಜ. 18 : ಬೆಳಗಾವಿ ನಗರಪಾಲಿಕೆ ಮೇಲಿರುವ ಭಗವಾ ಧ್ವಜಕ್ಕೆ ಯಾರಾದರೂ ಕೈ ಹಾಕಿದರೆ ಅವರ ಕೈ ಕತ್ತರಿಸುವುದಾಗಿ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ರಾಮದಾಸ್ ಎಚ್ಚರಿಕೆ ನೀಡಿದ್ದಾರೆ. ಕನ್ನಡದ ನೆಲೆ ಬೆಳಗಾವಿಯಲ್ಲಿ ನಿಂತುಕೊಂಡು ಕನ್ನಡಿಗರ ವಿರುದ್ಧ ಈ ರೀತಿಯ ಗುಟುರು ಹಾಕಿದ್ದಾರೆ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಮರಾಠಿಗರ ಮೇಲೆ ದೌರ್ಜನ್ಯ ನಡೆಸತೊಡಗಿದೆ. ಅದರಲ್ಲೂ ಯುವಕರನ್ನು ಗುರಿಯಾಗಿಸಿಕೊಂಡು ಸುಳ್ಳು ಮೊಕದ್ದಮೆ ಹೂಡುವುದು ನಿಲ್ಲಿಸಬೇಕು ಎಂದು ರಾಮದಾಸ್ ಆಗ್ರಹಿಸಿದರು. ರಾಜ್ಯಸಭಾ ಸದಸ್ಯ ಭರತ್ ಕುಮಾರ್ ರಾವುತ್ ಮಾತನಾಡಿ, ಗಡಿ ಭಾಗ ಮರಾಠಿಗರ ಮೇಲೆ ಕಿರುಕುಳ ಹೀಗೆ ಮುಂದುವರಿದಲ್ಲಿ ಮಹಾರಾಷ್ಟ್ರದಲ್ಲಿರುವ ಕನ್ನಡಗರಿಗೆ ಏನು ಮಾಡುತ್ತೇವೆ ಎಂದು ಹೇಳುವುದಿಲ್ಲ, ಮಾಡಿ ತೋರಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟ ಸೂಚನೆ ನೀಡಿದರು.
ಬಿಎಸ್ ವೈ ಖಂಡನೆ
ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದೊಂದು ಖಂಡನೀಯ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕನ್ನಡಿಗರು, ಮರಾಠಿಗರು ಒಂದೇ ತಾಯಿ ಮಕ್ಕಳಂತೆ ಬಾಳುತ್ತಿದ್ದೇವೆ. ನಮ್ಮ ನಡುವೆ ವಿಷ ಬೀಜ ಬಿತ್ತಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರಾಮದಾಸ್ ಮಾಡಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಯಡಿಯೂರಪ್ಪ, ಮರಾಠಿಗರ ಮೇಲೆ ದೌರ್ಜನ್ಯ ನಡೆದಿಲ್ಲ, ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲ ಭಾಷಿಕರಿಗೂ ಸಹಬಾಳ್ವೆಯಿಂದ ಗೌರವಯುತವಾಗಿ ಬಾಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮರಾಠಿಗರ ಮೇಲೆ ದೌರ್ಜನ್ಯ ಖಂಡನೀಯ, ಠಾಕ್ರೆ












Click it and Unblock the Notifications