ಹುಬ್ಬಳ್ಳಿ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು
ಹುಬ್ಬಳ್ಳಿ, ಜ. 16 : ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಎಂಟು ಜನ ಡಕಾಯಿತರ ಬಂಧನದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.
ಬಂಧಿತ ಡಕಾಯಿತರು ಹುಬ್ಬಳ್ಳಿಯಲ್ಲಿ ಅಂದು ನಡೆದ ಸ್ಫೋಟದ ಹಿಂದೆ ತಮ್ಮ ಕೈವಾಡವಿದ್ದುಗಾಗಿ ಒಪ್ಪಿಕೊಂಡಿದ್ದಾರೆ. ಆ ಸ್ಫೋಟ ಭಯೋತ್ಪಾದಕರ ಕೃತ್ಯವೆಂದು ಮೊದಲು ಗ್ರಹಿಸಲಾಗಿತ್ತು. ಸಾರ್ವಜನಿಕ ರಜೆಯಂದು ಸ್ಫೋಟ ಸಂಭವಿಸಿದ್ದರಿಂದ ಯಾರೂ ಗಾಯಗೊಂಡಿರಲಿಲ್ಲ.
ಎಂಟು ಜನ ಡಕಾಯಿತರ ತಂಡವನ್ನು ಬಾಗಲಕೋಟೆ ಪೊಲೀಸರು ಜನವರಿ 9ರಂದು ಬಂಧಿಸಿದ ನಂತರ ವಿಚಾರಣೆಯಲ್ಲಿ ಹುಬ್ಬಳ್ಳಿ ಸ್ಫೋಟದಲ್ಲಿ ತಾವು ಭಾಗಿಯಾಗಿದ್ದ ವಿಷಯವನ್ನು ಬಹಿರಂಗಪಡಿಸಿದರು. ಇದೇ ತಂಡ ಮತ್ತೊಂದು ಸ್ಫೋಟದ ಸಂಚು ನಡೆಸಲು ಹುನ್ನಾರ ನಡೆಸುತ್ತಿದ್ದುದಾಗಿಯೂ ವಿಚಾರಣೆಯಲ್ಲಿ ತಿಳಿದುಬಂದಿದೆ.
ಹುಬ್ಬಳ್ಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲು ಬಾಗಲಕೋಟೆ ನ್ಯಾಯಾಲಯ ಪ್ರಕರಣವನ್ನು ಹುಬ್ಬಳ್ಳಿಗೆ ವರ್ಗಾಯಿಸಿದೆ. ಬಂಧಿತರನ್ನು ಸದ್ಯದಲ್ಲಿಯೇ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
(ಏಜೆನ್ಸೀಸ್)