ಭಗವಾಧ್ವಜ ತೆಗೆಯಲು ಕರವೇ ಯತ್ನ,: ಲಾಠಿ ಚಾರ್ಜ್
ಬೆಳಗಾವಿ, ಜ. 16 : ಮಹಾನಗರಪಾಲಿಕೆಯ ಮೇಲಿರುವ ಭಗವಾಧ್ವಜವನ್ನು ತೆಗೆಯಲು ತೆರಳಿದ್ದ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ಮೇಲೆ ರಾಜ್ಯ ಪೊಲೀಸರೆ ಲಾಠಿ ಪ್ರಹಾರ ನಡೆಸಿದ್ದರಿಂದ ಪಾಲಿಕೆ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾದ ಘಟನೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ನಡೆದಿದೆ.
ಒಂದೆಡೆ ಬೆಳಗಾವಿಯಲ್ಲಿ ಐತಿಹಾಸಿಕ ಅಧಿವೇಶನ ಆರಂಭವಾಗಿದೆ. ಇನ್ನೊಂದೆಡೆ ಅಧಿವೇಶನ ವಿರೋಧಿಸಿ ಎಂಇಎಸ್ ಮುಖಂಡರು ಮಹಾಮೇಳಾವ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಮರಾಠಿಗರ ಈ ಉದ್ಧಟಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಪ್ರವೀಣ್ ಶೆಟ್ಟಿ ಬಣ ಇಂದು ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜವನ್ನು ಕಿತ್ತೆಸೆಯಲು ಮುಂದಾಯಿತು.
ಕನ್ನಡ ಪರ ಸಂಘಟನೆಗಳ ಈ ಪ್ರತಿಭಟನೆಯನ್ನು ಅರಿತ ಸರ್ಕಾರ ಪಾಲಿಕೆ ಸುತ್ತಲೂ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿತ್ತು. ಇದನ್ನು ಲೆಕ್ಕಿದ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಮರಾಠಿಗರ ವಿರುದ್ಧ ಘೋಷಣೆ ಕೂಗುತ್ತಾ ಪಾಲಿಕೆ ಮೇಲಿರುವ ನೇತಾಡುತ್ತಿರುವ ಭಗವಾಧ್ವಜವನ್ನು ಕೆಳಗಿಸಲು ಮುಂದಾದಾಗ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ಆರಂಭವಾಯಿತು. ಪರಿಸ್ಥಿತಿ ಕೈಮೀರಲಿದೆ ಎಂದು ಅರಿತ ಪೊಲೀಸರು ಕರವೇ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇಯ ಕೆಲ ಕಾರ್ಯಕರ್ತರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಒಂದೆಡೆ ಸ್ಥಳೀಯ ಜನರ ವಿಶ್ವಾಸಾರ್ಹತೆ ತುಂಬುವ ಜತೆಗೆ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಅಧಿವೇಶನ ನಡೆಸುವ ಮಹತ್ವದ ತೀರ್ಮಾನ ಕೈಗೊಂಡು ಅದ್ಧೂರಿ ಕಾರ್ಯಕ್ರಮ ನಡೆಸತೊಡಗಿದೆ. ಆದರೆ, ಇನ್ನೊಂದಡೆ ಬೆಳಗಾವಿ ಪಾಲಿಕೆ ಮೇಲಿರುವ ಭಗವಾ ಧ್ವಜವನ್ನು ತೆಗೆಯಲು ಕನ್ನಡಪರ ಸಂಘಟನೆಗಳು ಯತ್ನಿಸಿದರೆ, ಸರ್ಕಾರ ಅವರನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಕನ್ನಡ ಪ್ರೇಮಿಗಳಿಗೆ ತೀವ್ರ ಬೇಸರದ ಉಂಟು ಮಾಡಿರುವ ಸಂಗತಿಯಾಗಿದೆ.
ಘಟನೆಯನ್ನು ತೀವ್ರ ಖಂಡಿಸಿರುವ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸರ್ಕಾರದ ಕ್ರಮಕ್ಕೆ ಕಿಡಿಕಾರಿದ್ದಾರೆ. ಕಳೆದ 50 ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಭಗವಾಧ್ವಜ ಹಾರುತ್ತಿದೆ. ಅನೇಕ ರಾಜಕಾರಣಿಗಳು ಕಂಡು ಕಾಣಿದ ಹಾಗೆ ವರ್ತಿಸುತ್ತಿದ್ದಾರೆ. ಅಧಿವೇಶನ ನಡೆಯುತ್ತಿರುವ ಮಹತ್ವ ಘಳಿಗೆಯಲ್ಲಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ ಕಾರ್ಯಕ್ರಮ ಆಯೋಜಿಸಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಮೇಳಾವ ಕಾರ್ಯಕ್ರಮಕ್ಕೆ ಪ್ರತಿಯಾಗಿ ಮರಾಠಿಗರಿಗೆ ಸೂಕ್ತ ಪಾಠ ಕಲಿಸುವ ಸಲುವಾಗಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಬೇಕಿತ್ತು. ಭಗವಾಧ್ವಜ ತೆಗೆಯಲು ತೆರಳಿದ ಕರವೇ ಕಾರ್ಯಕರ್ತರ ಮೇಲೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಶೆಟ್ಟಿ ಆರೋಪಿಸಿದರು. ಸರ್ಕಾರದ ಕ್ರಮದ ವಿರುದ್ಧ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಪತಿ, ಪತ್ನಿಗಿಲ್ಲ ಒಂದೆಡೆ ಕೂರಂಗಿಲ್ಲ: ಶೆಟ್ಟರ್












Click it and Unblock the Notifications