ದೇವಾಲಯಗಳಿಗೆ ಸ್ವಾಯತ್ತತೆ ನೀಡಿ: ಹೆಗ್ಗಡೆ
ಉಡುಪಿ, ಜ. 15 : ದೇವಸ್ಥಾನಗಳ ಜಿರ್ಣೋದ್ಧಾರ, ಅಭಿವೃದ್ಧಿ ಕಾರ್ಯ ಹಾಗೂ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕು ಎಂದು ಕರಾವಳಿ ಪ್ರದೇಶಗಳ ದೇವಸ್ಥಾನಗಳ ಧರ್ಮದರ್ಶಿ ಮಂಡಳಿಯ ಮುಖ್ಯಸ್ಥರು ಒಕ್ಕೊರಲಿನ ಧ್ವನಿಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಕರಾವಳಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸುಮಾರು 300 ಕ್ಕೂ ಅಧಿಕ ದೇವಾಲಯಗಳ ಧರ್ಮದರ್ಶಿಗಳು ಒಂದು ದಿನದ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಧರ್ಮದರ್ಶಿಗಳಿಂದ ಒಕ್ಕೂರಲಿನ ಪ್ರತಿಕ್ರಿಯೆ ವ್ಯಕ್ತವಾಯಿತು. ಕರಾವಳಿ ಪ್ರದೇಶದಲ್ಲಿರುವ ದೇವಾಲಯಗಳ ಮೇಲೆ ಸರ್ಕಾರದ ಬಿಗಿಹಿಡಿತದಿಂದಾಗಿ ದೇವಾಲಯಗಳು ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವ ಆರೋಪವು ಕೇಳಿ ಬಂದಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿಗಳು, ಧಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ದೇವಾಲಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಇನ್ನಷ್ಟು ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಮಾತನಾಡಿ, ಸುಮಾರು 60 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಬೇಕಿದೆ. ಕಳೆದ ಅನೇಕ ದಶಕಗಳಿಂದ ದೇವಾಲಯಗಳು ನೂರೆಂಟು ಸಮಸ್ಯೆಗಳಿಂದ ನರಳತೊಡಗಿವೆ. ಆ ಸಮಸ್ಯೆಗಳತ್ತ ಸರ್ಕಾರ ಕೂಡಲೇ ಗಮನಹರಿಸಿಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿರುವ ದೇವಾಲಯಗಳ ಧರ್ಮದರ್ಶಿಗಳು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications