ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಪರೂಪದ ಕ್ಷಣ
ಬೆಂಗಳೂರು, ಜ. 14 : ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲ ಗೃಹೋಪಯೋಗಿ ವಸ್ತುಗಳ ಅಸಾಧ್ಯ ಬೆಲೆ ಏರಿಕೆಯ ನಡುವೆಯೂ ನಾಡಿನ ಜನರ ಸಂಕ್ರಮಣ ಹಬ್ಬದ ಹುಮ್ಮಸ್ಸು ಎಳ್ಳಷ್ಟೂ ಕುಂದಿಲ್ಲ. ಬೆಲೆ ಏರಿಕೆಯಂಥ ಸಂಗತಿಗಳಿಗೆ ಜನಸಾಮಾನ್ಯರು ಬಾಯಿಮಾತಿಲ್ಲದೆ ಹೊಂದಿಕೊಳ್ಳುವುದರಿಂದ ಎಳ್ಳು ಬೆಲ್ಲದ ಭರಾಟೆ ಭರದಿಂದಲೇ ಸಾಗಿದೆ.
ಇಂದು ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ ಸೂರ್ಯದೇವ ಬೆಂಗಳೂರಿನಲ್ಲಿ ಮುಸುಕಿದ ಮೋಡಗಳಿಗೆ ಬೆದರಿ ಕಣ್ಣಾಮುಚ್ಚಾಲೆಯಾಡುವುದಿರಲಿ ಭೂಮಿಯ ಮೇಲೆ ಇಣುಕಿಯೂ ನೋಡಿರಲಿಲ್ಲ. ಆದರೆ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಘಳಿಗೆ ಹತ್ತಿರವಾಗುತ್ತಿದ್ದಂತೆ ಭಕ್ತಗಣದ ಮೊಗದಲ್ಲಿ ಸಂತಸ ಮೂಡಿಸಿದ.
ಬೆಂಗಳೂರಿನ ಅತಿ ಪುರಾತನ ದೇವಸ್ಥಾನವಾಗಿರುವ ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನ ಅಪರೂಪದ ಕ್ಷಣಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು. ಈ ಅಪರೂಪದ ಕ್ಷಣವನ್ನು ಕಣ್ಣಲ್ಲಿ ತುಂಬಿಕೊಂಡು ಧನ್ಯರಾದರು. ಆ ಅಪರೂಪದ ಕ್ಷಣವೇನೆಂದರೆ, ಸೂರ್ಯ ಕಿರಣ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಕ್ಷಣ ನಂದಿಯ ಕೊಂಬಿನ ಮುಖಾಂತರ ಶಿವ ಲಿಂಗದ ಮೇಲೆ ಬೀಳವುದು. ಸಾಯಂಕಾಲ 5.17ರ ಸುಮಾರಿಗೆ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬಿದ್ದು ಭಕ್ತರನ್ನು ಪುಳಕಿತಗೊಳಿಸಿತು. ವರ್ಷಾನುವರ್ಷ ಈ ವಿಸ್ಮಯಕ್ಕೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆ.
ಸೂರ್ಯನ ಕಿರಣ ಶಿವಲಿಂಗದ ಮೇಲೆ ಬಿದ್ದ ಮೇಲೆಯೇ ಉತ್ತರಾಯಣ ಪ್ರಾರಂಭವಾಗುತ್ತದೆ ಎಂಬ ಪ್ರತೀತಿಯಿದೆ. ದೇವಸ್ಥಾನದಲ್ಲಿ ಬೆಳಗಿನಿಂದಲೂ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರುತ್ತಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications