ಕಗ್ಗಂಟಾದ ದಂಡಾವತಿ ಯೋಜನೆ ಶಂಕುಸ್ಥಾಪನೆ
ಶಿವಮೊಗ್ಗ, ಜ. 13 : ದಂಡಾವತಿ ಯೋಜನೆ ವಿರೋಧಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಸರ್ಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ದಂಡಾವತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಇನ್ನೊಂದಡೆ ದಂಡಾವತಿ ಯೋಜನೆ ವಿರೋಧಿ ಸಮಿತಿಯೂ ಯಾವುದೇ ಕಾರಣಕ್ಕೂ ಶಂಕುಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ದಂಡಾವತಿ ಯೋಜನೆಯಲ್ಲಿ ಒಟ್ಟು ಆರು ಹಳ್ಳಿಗಳು ಮುಳುಗಲಿವೆ. ಈ ಯೋಜನೆಯಿಂದ ನೂರಾರು ಎಕರೆ ಪ್ರದೇಶ ನೀರಾವರಿ ಪ್ರದೇಶವಾಗಲಿದೆ. ಇದರ ಜೊತೆಗೆ ಈ ಯೋಜನೆಯಲ್ಲಿ ಜಮೀನು ಮತ್ತಿತರ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳಲಿರುವ ಜನರಿಗೆ ಸರ್ಕಾರ ಸೂಕ್ತ ಪರಿವಾರ ನೀಡಲಿದೆ ಎಂದು ಹೇಳಿದೆ. ಇಷ್ಟಾದರೂ ದಂಡಾವತಿ ಯೋಜನೆಗೆ ತೀವ್ರ ವಿರೋಧ ಎದುರಾಗಿದೆ. ಸರ್ಕಾರ ಈ ಯೋಜನೆಗೆ ಮುಂದಾದಾಗ ಸಂತ್ರಸ್ತ ರೈತ ಮುರುಗೋಡು ಗ್ರಾಮದ ಶಿವಪ್ಪ ಎಂಬಾತ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಪ್ಪ ಮೂರು ಎಕರೆ ಜಮೀನು ಹೊಂದಿದ್ದ ಎನ್ನಲಾಗಿದೆ.
ದಂಡಾವತಿ ಯೋಜನೆ ಒಟ್ಟು 272 ಕೋಟಿ ರುಪಾಯಿ ವೆಚ್ಚದ ಯೋಜನೆಯಾಗಿದೆ. ಇದರಿಂದ ಸಾಕಷ್ಟು ಪ್ರದೇಶ ನೀರು ಕಾಣಲಿದೆ. ಪ್ರತಿ ಯೋಜನೆಗೂ ವಿರೋಧಗಳು ಇರುತ್ತವೆ. ಆದರೆ ಇದರಿಂದ ಮುಂದಿನ ದಿನಗಳಲ್ಲಿ ಲಾಭ ಆಗಲಿದೆ. ಶಂಕುಸ್ಥಾಪನೆ ನಿಲ್ಲುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಕ್ರಮದಿಂದ ಬೇಸತ್ತು ಅತ್ಮಹತ್ಯೆ ಮಾಡಿಕೊಂಡಿರುವ ಮುರುಗೋಡ ಗ್ರಾಮದ ರೈತ ಶಿವಪ್ಪನ ಕುಟುಂಬಕ್ಕೆ 10 ಲಕ್ಷ ರುಪಾಯಿ, ಹಾಗೂ ಜೀವನ ನಿರ್ವಹಣೆಗೆ ಸರ್ಕಾರಿ ಕೆಲಸ ನೀಡಬೇಕು ಎಂದು ದಂಡಾವತಿ ಯೋಜನೆ ವಿರೋಧಿ ಸಮಿತಿ ಅಧ್ಯಕ್ಷ ವಾಮನಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಮುಳುಗಿದ ಒಂದು ಸಂಸ್ಕೃತಿಯ ನೆನೆದು
ಮುಂದಿನ ಜನ್ಮದಲ್ಲಿ ಯಡಿಯೂರಪ್ಪ ಟೇಲರ್!












Click it and Unblock the Notifications