ರಾಜ್ಯ ರಕ್ಷಣೆಗೆ ಅಗತ್ಯ ಕ್ರಮ, ಯಡಿಯೂರಪ್ಪ
ಕೋರಮಂಗಲದ ಕೆ.ಎಸ್.ಆರ್.ಪಿ 3ನೇ ಪಡೆ ಕವಾಯಿತು ಮೈದಾನದಲ್ಲಿ ನಡೆದ 52ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ 2008 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜನತೆಯ ಭದ್ರತೆ ಹಾಗೂ ರಕ್ಷಣೆಯ ವಿಷಯದಲ್ಲಿ ಸರ್ಕಾರ ಹೆಚ್ಚು ಕಾಳಜಿ ವಹಿಸಿದೆ ಎಂದ ಮುಖ್ಯಮಂತ್ರಿಗಳು, ಸಮಾಜದ್ರೋಹಿ ಚಟುವಟಿಕೆಗಳನ್ನು ಬೇರು ಸಹಿತ ಕಿತ್ತೊಗೆಯಲು ಪೊಲೀಸರು ಹಗಲಿರುಳು ಶ್ರಮಿಸಬೇಕೆಂದು ಕರೆ ನೀಡಿದರು. ಸಮಾಜದಲ್ಲಿ ಶಿಸ್ತು, ಶಾಂತಿ ಕಾಪಾಡುವ ಗುರುತರ ಹೊಣೆ ಪೊಲೀಸರ ಮೇಲಿದೆ ಎಂದ ಅವರು, ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಸೌಹಾರ್ದ ಸಂಬಂಧ ಹೊಂದುವಂತೆ ಕರೆ ನೀಡಿದರು.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಾರ್ವಜನಿಕರನ್ನು ರಕ್ಷಿಸಲು ಜೀವತೆತ್ತ ರಕ್ಷಣಾ ಸಿಬ್ಬಂದಿಯನ್ನು ಈ ಸಂದರ್ಭ ಸ್ಮರಿಸಿದ ಅವರು, ಇಂತಹವರ ತ್ಯಾಗ ಸ್ಮರಣೀಯ. ಇಂತಹವರು ಸಮಾಜದ ಆಸ್ತಿ ಎಂದರು. ವಿವಿಧ ರಾಜ್ಯಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಪೋಲಿಸರು ಈ ಕೂಟದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿಯಾಗಿದೆ. ಹೀಗೆ ವಿವಿಧ ರಾಜ್ಯಗಳ ಪೋಲಿಸ್ ಸಿಬ್ಬಂದಿ ಒಟ್ಟಿಗೆ ಕಲೆತು ಪರಸ್ಪರ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿರುವುದರಿಂದ ಪೋಲಿಸರ ಕಾರ್ಯಶ್ರಮತೆ ಹೆಚ್ಚುತ್ತದೆ ಎಂದರು.
ಬೆಂಗಳೂರಿನಲ್ಲಿ 2ನೇ ಬಾರಿ ಕರ್ತವ್ಯ ಕೂಟ ಆಯೋಜಿಸಿರುವುದು ರಾಜ್ಯಕ್ಕೆ ಗೌರವ ತರತಕ್ಕಂತಹ ವಿಷಯ ಎಂದ ಅವರು ಕರ್ತವ್ಯ ಕೂಟವನ್ನು ಯಶಸ್ವಿಗೊಳಿಸಿದ ರಾಜ್ಯ ಪೊಲೀಸ್ ಇಲಾಖೆಯನ್ನು ಈ ಸಂದರ್ಭ ಮುಖ್ಯಮಂತ್ರಿಗಳು ಅಭಿನಂದಿಸಿದರು. ಕರ್ನಾಟಕದ ಪೊಲೀಸ್ ಇಲಾಖೆಯು ಆತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದೆ ಎಂದ ಅವರು ರಾಜ್ಯಕ್ಕೆ ಎನ್.ಎಸ್.ಜಿ ಘಟಕ ಮಂಜೂರು ಮಾಡಲು ಕೇಂದ್ರ ಸರ್ಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಇದಕ್ಕೂ ಮುನ್ನ ಪೊಲೀಸ್ ಫೋಟೋಗ್ರಫಿ ಸ್ಪರ್ಧೆ, ವೈಜ್ಞಾನಿಕ ನೆರವು ಸ್ಪರ್ಧೆ, ಬೆರಳಚ್ಚು ಪತ್ತೆ ಸ್ಪರ್ಧೆ, ಕಂಪ್ಯೂಟರ್ ಜ್ಞಾನ ಸ್ಪರ್ಧೆ, ವಿಧಿ ವಿಜ್ಞಾನ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಅವರು ಪಾರಿತೋಷಕಗಳನ್ನು ವಿತರಿಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶ್ರೀ ಆರ್ ಶ್ರೀಕುಮಾರ್ ಸೇರಿದಂತೆ ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)