ನೌಕರಿ ಸಿಗದೇ ಐಐಟಿ ಟಿಕ್ಕಿ ನೇಣಿಗೆ
ಕಾನ್ ಪುರ್, ಜ. 4 : ಕ್ಯಾಂಪಸ್ ಸಂದರ್ಶನದಲ್ಲಿ ಅಫ್ಟರಾಲ್ ಒಂದು ನೌಕರಿ ಗಿಟ್ಟಸಲು ಸಾಧ್ಯವಾಗದಿದ್ದರೆ ಈ ಜೀವಕ್ಕೆ ಏನು ಬೆಲೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿಯಾದರೂ ಏನು ಪ್ರಯೋಜನ ಎಂದು ಕಾನ್ ಪುರ್ ಐಐಟಿಯಲ್ಲಿ ಎಲೆಕ್ಟ್ರೀಕಲ್ ವಿಭಾಗದಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಪದವಿಯ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಕೊಠಡಿಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಆಂಧ್ರಪ್ರದೇಶದ ನೆಲ್ಲೂರಿನ ಜಿ ಸುಮನ್ ಅತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಿ ಸುಮನ್ ಕಾನ್ ಪುರ್ ಐಐಟಿಯಲ್ಲಿ ಎರಡನೇ ವರ್ಷದ ಎಂ ಟೆಕ್ (ಎಲೆಕ್ಟ್ರೀಕಲ್ ವಿಭಾಗ) ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಮನ್, ಇತ್ತೀಚೆಗೆ ತನ್ನ ಕಾಲೇಜಿನಲ್ಲಿ ನಡೆದ ಎಂಎನ್ ಸಿ ಕಂಪನಿಗಳ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿರಲಿಲ್ಲ. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುಮನ್ ಸೇರಿ ಅನೇಕರಿಗೆ ನೌಕರಿ ಸಿಕ್ಕಿಲ್ಲ. ಆದರೆ, ಇದರಿಂದ ತೀವ್ರ ಮನನೊಂದ ಸುಮನ್ ಆತ್ಮಹತ್ಯೆಯಂಥ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಕಾನ್ ಪುರ್ ಐಐಟಿಯ ಆಡಳಿತ ಮಂಡಳಿಯ ನಿರ್ದೇಶಕ ಸಂಜಯ ಗೋವಿಂದ ಪಾಂಡೆ ತಿಳಿಸಿದ್ದಾರೆ. ಸುಮನ್ ಅತ್ಮಹತ್ಯೆಗೆ ಪ್ರಾಧ್ಯಾಪಕರ ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಲೇಜ್ ಕ್ಯಾಂಪಸ್ ನಲ್ಲಿ ನಡೆದ ಅನೇಕ ಎಂಎನ್ ಸಿ ಕಂಪನಿಗಳು ನಡೆಸಿದ ಸಂದರ್ಶನದಲ್ಲಿ ನೌಕರಿ ಗಿಟ್ಟಿಸಲು ಸಾಧ್ಯವಾಗಲಿಲ್ಲ ಎನ್ನುವುದು ಆತನ ಅವಮಾನ ಸಂಗತಿಯಾಗಿತ್ತು. ತನ್ನ ಸಹಪಾಠಿಗಳಿಗೆ ನೌಕರಿ ಸಿಕ್ಕಿದೆ, ಆದರೆ ತನಗೆ ದೊರೆತಿಲ್ಲ ಎನ್ನುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕ್ಯಾಂಪಸ್ ಸಂದರ್ಶನದ ನಂತರ ಸುಮನ್ ಸಹಪಾಠಿಗಳ ಜೊತೆಗೆ ಸೇರುವುದು ಕಡಿಮೆ ಮಾಡಿದ್ದು, ಅಷ್ಟಕಷ್ಟೆ ಎನ್ನವಂತಾಗಿದ್ದ ಎನ್ನುತ್ತಾರೆ ಆತನ ಸ್ನೇಹಿತರು. ಕಳೆದ ಶನಿವಾರ ಎಲ್ಲರೊಂದಿಗೆ ಉಟ ಮುಗಿಸಿ ಕೊಠಡಿ ಸೇರಿಕೊಂಡಿದ್ದಾನೆ. ಆದರೆ ಭಾನುವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಕೊಠಡಿಯಿಂದ ಹೊರಬಾರದಿದ್ದನ್ನು ಗಮನಿಸಿದ ಆತನ ಗಳೆಯರು ಆತನ ಕೊಠಡಿ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಸುಮನ್ ಕೊಠಡಿಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)