ಶಿವರಾಜ್ ಪಾಟೀಲ್ ರಕ್ತ ಯಾವ ದೇಶದ್ದು?
ಮುಂಬೈ, ಜ. 4 : ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ಮೈಯಲ್ಲಿ ಹರಿಯುತ್ತಿರುವ ರಕ್ತ ಭಾರತದ್ದೋ ಅಥವಾ ಇಟಲಿಯದ್ದೋ ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆ ನೀಡದಿರುವುದನ್ನು ಸಮರ್ಥಿಸಿಕೊಂಡ ನೀಡಿರುವ ಪಾಟೀಲ್ ಹೇಳಿಕೆಯನ್ನು ಉದ್ಧವ್ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ.
ಶಿವರಾಜ್ ಪಾಟೀಲ್ ನಂತಹ ನಾಯಕರು ಪಾಕಿಸ್ತಾನತಕ್ಕಿಂತಲೂ ಅಪಾಯಕಾರಿ ಎಂದು ಕಿಡಿಕಾರಿದ ಉದ್ಧವ್, ಇಂತಹ ವ್ಯಕ್ತಿಗಳು ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಇಂಥವರಿಂದಲೇ ಮುಂಬೈ ಭಯೋತ್ಪಾದನೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಶಿವರಾಜ್ ಪಾಟೀಲ್ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಮೈಮೇಲೆ ಎಚ್ಚರವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಟೀಲ್ ಒಬ್ಬ ಸಾಮಾನ್ಯ ಮನುಷ್ಯ ಅಲ್ಲ. ದೇಶದ ಉನ್ನತ ಹುದ್ದೆಯಾದ ಗೃಹ ಸಚಿವ ಸ್ಥಾನದಲ್ಲಿದ್ದವರು. ಮಾತಿನ ಮೇಲೆ ನಿಗಾ ಇರಲಿ ಎಂದು ಸಲಹೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿರುವ ಬಿಜೆಪಿ ಮುಖಂಡ ಗೋಪಿನಾಥ್ ಮುಂಡೆ, ಪಾಟೀಲ್ ಹೇಳಿಕೆ ದುರದೃಷ್ಟಕರ ಎಂದರು. ಸಂಸತ್ ದಾಳಿಯ ಪ್ರಮುಖ ಆರೋಪಿ ಅಫ್ಜಲ್ ಗುರುನನ್ನು ಗಲ್ಲುಗೇರಿಸಿ ಎಂದು ಸುಪ್ರಿಂಕೋರ್ಟ್ ಅದೇಶ ನೀಡಿದೆ. ಇಷ್ಟಾದರೂ ಕೂಡ ಕಾಂಗ್ರೆಸ್ ನಾಯಕರು ವರ್ತಿಸುವ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವುದಾಗಿದೆ ಎಂದು ಆರೋಪಿಸಿದರು.
ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ಪ್ರಮುಖ ರೂವಾರಿ ಅಫ್ಜಲ್ ಗುರನನ್ನು ಗಲ್ಲಿಗೇರಿಸಲು ಅಷ್ಟೊಂದು ಅವಸರ ಏಕೆ ಎಂದು ಭಾನುವಾರ ಔರಂಗ್ ಬಾದ್ ನಲ್ಲಿ ನಡೆದ ಸಭೆಯಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಪ್ರಶ್ನಿಸಿದ್ದರು. ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿ ಹತ್ಯೆ ಮಾಡಿದವರ ಪ್ರಕರಣವೇ ಬಾಕಿ ಇದೆ. 30 ರಿಂದ 35 ಮಂದಿಯ ಕ್ಷಮದಾನದ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಅವರೆನ್ನಲ್ಲಾ ಬಿಟ್ಟು ಅಫ್ಜಲ್ ಗುರುವನ್ನೇ ಗಲ್ಲಿಗೇರಿಸಿ ಎಂದು ಏಕೆ ಹೇಳುತ್ತೀರಿ ಎಂದು ಶಿವರಾಜ್ ಪಾಟೀಲ್ ಮರು ಪ್ರಶ್ನೆ ಹಾಕಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications