ಬಾಲಕನ ಅಪಹರಣ, 10 ಲಕ್ಷ ರು. ಬೇಡಿಕೆ
ಬೆಂಗಳೂರು, ಜ. 3 : ಹೊಸ ವರ್ಷಾಚರಣೆಯ ದಿನವೇ ಶಾಲೆಗೆ ತೆರಳಿದ್ದ ಏಳು ವರ್ಷದ ಹುಡುಗನನ್ನು ಅಪಹರಿಸಿ 10 ಲಕ್ಷ ರು. ಹಣ ಒತ್ತಾಯಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯಲ್ಲಿ ಜರುಗಿದೆ.
ಯಾರೋ ಗೊತ್ತಿರುವವರು ಹಣದಾಸೆಗಾಗಿ ತಮ್ಮ ಮಗನನ್ನು ಅಪಹರಿಸಲಾಗಿದೆ ಎಂದು ಆಟೋ ಚಾಲಕ ಲಕ್ಷ್ಮಣ್ ಮತ್ತು ಸರಸ್ವತಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ : ಡಿಸೆಂಬರ್ 31ರಂದು ಇಂಡಿಯನ್ ಪಬ್ಲಿಕ್ ಶಾಲೆಗೆ ತೆರಳಿದ ಬಾಲಕ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಬೇಕಾಗಿತ್ತು. ಆದರೆ ಸಾಯಂಕಾಲವಾದರೂ ಹಿಂದಿರುಗದಿದ್ದರಿಂದ ಪಾಲಕರು ಶಾಲೆ, ಹತ್ತಿರದ ಅಜ್ಜಿಯಮನೆಯಲ್ಲಿ ವಿಚಾರಿಸಿದ್ದಾರೆ. ಅಂದು ರಾತ್ರಿ 11 ಗಂಟೆಯವರೆಗೆ ಹುಡುಕಿದರೂ ಬಾಲಕ ಸಿಕ್ಕಿಲ್ಲ.
ಹುಡುಕಿ ಬಸವಳಿದಿದ್ದ ಪಾಲಕರಿಗೆ ರಾತ್ರಿ 1 ಗಂಟೆಗೆ ಹೊಸಕೋಟೆಯಲ್ಲಿನ ಟೆಲಿಫೋನ್ ಬೂತ್ ನಿಂದ ಕರೆ ಬಂದಿದೆ. ದುಷ್ಕರ್ಮಿಗಳು ಬಾಲಕನನ್ನು ಬಿಡಬೇಕೆಂದರೆ 10 ಲಕ್ಷ ರು. ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಆಟೋ ನಡೆಸಿ ಜೀವನ ಹೊರೆಯುತ್ತಿರುವ ಲಕ್ಷ್ಮಣ್ ದಂಪತಿಗಳಿಂದ ಅಷ್ಟೊಂದು ಹಣ ಒಟ್ಟುಗೂಡಿಸಲು ಸಾಧ್ಯವಿಲ್ಲವೆಂಬುದನ್ನು ಅರಿತ ಅಪಹರಣಕಾರರು ಬೇಡಿಕೆಯನ್ನು 2 ಲಕ್ಷಕ್ಕೆ ಇಳಿಸಿದ್ದಾರೆ.
ಸಂಭಾಷಣೆ ನಡೆಯುವಾಗ ಬಾಲಕನೊಡನೆ ಮಾತನಾಡಲು ಅಪಹರಣಕಾರರು ಅವಕಾಶ ನೀಡಿಲ್ಲ. ಅಪಹರಣಕಾರರು ಉರ್ದು ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ತಮಗೆ ಯಾರ ವಿರುದ್ಧವೂ ದ್ವೇಷವಿಲ್ಲದ್ದರಿಂದ ಯಾರ ಮೇಲೂ ಅನುಮಾನವಿಲ್ಲ ಎಂದು ಬಾಲಕನ ಪಾಲಕರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications