ಗುಲಬರ್ಗಾ ತೊಗರಿ, ಕಡಲೆ ಶುಭವಾರ್ತೆ
ಕಲಬುರ್ಗಿ, ಡಿ. 20 : ಜಿಲ್ಲೆಯ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಗುಲಬರ್ಗಾ, ಸೇಡಂ, ಶಹಾಪೂರ ಮತ್ತು ಯಾದಗಿರ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 18ರಂದು ತೊಗರಿ ಕಾಯಿಕೊರಕದ ಕ್ಷಿಪ್ರ ಸಂಚಾರ ಸಮೀಕ್ಷೆ ಕೈಗೊಳ್ಳಲಾಯಿತು. ಈ ವಿಷಯವನ್ನು ಗುಲಬರ್ಗಾ ಕೃಷಿ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿಗಳು ತಿಳಿಸಿದ್ದಾರೆ.
ಕೀಟದ ಬಾಧೆಯು ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ ನಷ್ಟದ ರೇಖೆಗಿಂತ ಕಡಿಮೆ ಕಂಡುಬಂದಿದೆ. ತೊಗರಿ ಸಂಪೂರ್ಣವಾಗಿ ಬೆಳೆದು ಕಟಾವಿನ ಹಂತದಲ್ಲಿದ್ದುದ್ದನ್ನು ಸಮೀಕ್ಷಾ ವರದಿಯಲ್ಲಿ ಕಂಡಿಬಂದಿದೆ. ಅಲ್ಲಲ್ಲಿ ರೈತರು ಕಟಾವು ಪ್ರಾರಂಭಿಸಿದ್ದಾರೆ. ಅದರಂತೆ ಕಡಲೆ ಬೆಳೆಯು ಶೇ. 25ರಿಂದ 50 ಕಾಯಿ ಕಟ್ಟುವ ಹಂತದಲ್ಲಿದ್ದು ಕೀಟದ ಬಾಧೆ ಕಡಿಮೆ ಕಂಡು ಬಂದಿದೆ.
ಒಟ್ಟಾರೆ ಎಲ್ಲ ತಾಲೂಕುಗಳಲ್ಲಿ ಬೇಗನೆ ಮಾಗುವ ತಳಿಗಳು (ಗುಳ್ಯಾಳ) ಕಾಯಿ ಬಲಿಯುವ ಹಂತದಿಂದ ಕಟಾವು ಹಂತದವರೆಗೆ ಇದ್ದು ತಡವಾಗಿ ಮಾಗುವ ತಳಿಗಳು (ಮಾರುತಿ, ಆಶಾ, ಬಿ.ಎಸ್.ಎಮ್.ಆರ್.736) ಕಾಯಿ ಬಲಿಯುವ ಹಂತದಲ್ಲಿದೆ. ಕಡಲೆ ಬೆಳೆಯು ಹೂವಾಡುವ ಹಂತದಿಂದ ಕಾಯಿ ಕಟ್ಟುವ ಹಂತದಲ್ಲಿದ್ದು ಕೀಟದ ಬಾಧೆ ಸಮೀಕ್ಷೆಯಲ್ಲಿ ಕಡಿಮೆ ಕಂಡು ಬಂದಿದೆ ಎಂದು ಸಮೀಕ್ಷೆ ನಡೆಸಿದ ಕೃಷಿ ತಜ್ಞರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)