ಅಕ್ರಮ ಗಣಿಗಾರಿಕೆ ವರದಿಯಲ್ಲಿ ಗಣ್ಯರಿಗೆ ಸ್ಥಾನ
ಬೆಂಗಳೂರು, ಡಿ.20: ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗಡೆ ಡಿಸೆಂಬರ್ 18ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸೇರಿದಂತೆ 8 ಹಿರಿಯ ಅಧಿಕಾರಿಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಸುಮಾರು 36 ಕೋಟಿ ರು.ಸಂಪತ್ತನ್ನು ಲೂಟಿ ಮಾಡಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಧರ್ಮಸಿಂಗ್ಆಡಳಿತಾವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಸರ್ಕಾರಕ್ಕೆ ನೂರಾರು ಕೋಟಿ ರು. ನಷ್ಟವಾಗಿದೆ ಎಂಬ ಅಂಶವೂ ವರದಿಯಲ್ಲಿ ದಾಖಲಾಗಿದೆ. ಈ ಎಲ್ಲ ಬೆಳವಣಿಗಳು ರಾಜ್ಯದ ಉಪಚುನಾವಣೆ ಮೇಲೆ ಪರಿಣಾಮ ಬೀರಿವೆ. ವರದಿಯಲ್ಲಿ ಧರ್ಮಸಿಂಗ್ ಹೆಸರು ಪ್ರಸ್ತಾಪವಾಗಿರುವುದು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದೆ.
ಹಿರಿಯ ಐಎ ಎಸ್ ಅಧಿಕಾರಿಗಳಾದ ವಿ.ಉಮೇಶ್, ಗಂಗಾರಾಮ್ ಬಡೇರಿಯಾ, ಐ.ಆರ್.ಪೆರುಮಾಳ್, ಡಾ.ಡಿ.ಎಸ್.ಅಶ್ವಥ್, ಅಶೋಕ್ ದಳವಾಯಿ, ಮಹೇಂದ್ರ ಜೈನ್, ಐಪಿಎಸ್ ಅಧಿಕಾರಿ ಜೀಜಾ ಹರಿಸಿಂಗ್ ಹಾಗೂ ಗಣಿ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಬಸಪ್ಪ ರೆಡ್ಡಿ ಹೆಸರುಗಳು ವರದಿಯಲ್ಲಿವೆ ಎನ್ನಲಾಗಿದೆ.
ಒಬ್ಬ ರಾಜಕಾರಣಿ, ಎಂಟು ಅಧಿಕಾರಿಗಳ ವಿರುದ್ಧ ವರದಿಯಲ್ಲಿ ಹೇಳಿದ್ದೇನೆ. ವರದಿಯಲ್ಲಿನ ಹೆಸರುಗಳನ್ನು ಬಹಿರಂಗವಾಗಿ ಹೇಳಲು ಇಚ್ಛಿಸುವುದಿಲ್ಲ. ವರದಿ ಬೇಕಾದವರು ಆರ್ ಟಿಐನಲ್ಲಿ ಪಡೆಯಬಹುದು ಎಂದು ಲೋಕಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗಡೆ ತಿಳಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)