ಗಜೇಂದ್ರಗಡದಲ್ಲಿ ಯುವಜನಮೇಳ ಆರಂಭ
ಗದಗ, ಡಿ. 20 : ಗಜೇಂದ್ರಗಡದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಶನಿವಾರ ಅದ್ದೂರಿಯಾಗಿ ಆರಂಭವಾಯಿತು. ಮೇಳಕ್ಕೆ ಆಗಮಿಸಿರುವ ಪ್ರತಿನಿಧಿಗಳನ್ನು ಬರಮಾಡಿಕೊಳ್ಳಲು ಪಟ್ಟಣವನ್ನು ಯುವಜನತೆ ಅಂದವಾಗಿ ಸಿದ್ಧಮಾಡಿದ್ದಾರೆ. ನಗರದ ಪ್ರಮುಖ ಜೋಡು ರಸ್ತೆ ಕಾಲಕಾಲೇಶ್ವರಕ್ಕೆ ತೆರಳುವ ಮುಖ್ಯ ವೇದಿಕೆಯ ಮಾರ್ಗವನ್ನು ಬಣ್ಣ ಬಣ್ಣದ ದೀಪಾಲಂಕಾರಗಳಿಂದ ಶೃಂಗರಿಸಲಾಗಿದೆ. ಪ್ರಮುಖ ವೃತ್ತ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೃಹತ್ ಕಟೌಟ್ಗಳನ್ನು ನಿಲ್ಲಿಸಲಾಗಿದೆ.
ಕಾರ್ಯಕ್ರಮ ಜರುಗುವ ಮುಖ್ಯ ವೇದಿಕೆಯು 50 ಅಡಿ ಅಗಲವಿದ್ದು 20 ಅಡಿ ಎತ್ತರವಿದೆ. 5000 ವೀಕ್ಷಕರಿಗೆ ಆಸನಗಳನ್ನು ಹಾಕಲಾಗಿದ್ದು, ವಿಶಾಲವಾದ ಪೆಂಡಾಲನ್ನು ಹಾಕಲಾಗಿದೆ. ಕಲಾವಿದರ ವಾಸ್ತವ್ಯಕ್ಕಾಗಿ ಸರ್ಕಾರಿ ಪದವಿ ಕಾಲೇಜು ಹಾಗೂ ಕಾಲಕಾಲೇಶ್ವರ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಎಣ್ಣೆ ಹೋಳಿಗೆ - ಕರ್ಚಿಕಾಯಿ : ರಾಜ್ಯದ 29 ಜಿಲ್ಲೆಗಳಿಂದ ಆಗಮಿಸುವ 800 ಯುವ ಪ್ರತಿನಿಧಿಗಳಿಗೆ ಉತ್ತರ ಕರ್ನಾಟಕದ ವಿಶಿಷ್ಟ ಶೈಲಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ, ಕರ್ಚಿಕಾಯಿ, ಜೋಳದ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯೆ, ಚಟ್ನಿ, ಮೊಸರು ಹಾಗೂ ವಿವಿಧ ತರಕಾರಿ ವ್ಯಂಜನ ಪದಾರ್ಥಗಳು ಸಿದ್ಧಗೊಳ್ಳುತ್ತಿವೆ. ಇದಕ್ಕಾಗಿ ಹದಿನಾರು ಬಾಣಸಿಗರು ನಿನ್ನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ.
ರೋಣ ಶಾಸಕರು ಹಾಗೂ ಸಂಘಟನಾ ಸಮಿತಿ ಅಧ್ಯಕ್ಷರಾದ ಕಳಕಪ್ಪ ಬಂಡಿಯವರು ಸ್ಥಳೀಯ ಸಂಘಸಂಸ್ಥೆಗಳ, ಸಾರ್ವಜನಿಕರು ಹಾಗೂ ಗಣ್ಯರ ಸಭೆ ಏರ್ಪಡಿಸಿ ಈ ಭಾಗದಲ್ಲಿ ಮೊಟ್ಟ ಮೊದಲ ಬಾರಿ ಜರುಗುತ್ತಿರುವ ಯುವಜನ ಮೇಳವನ್ನು ಯಶಸ್ವಿಯಾಗಿಸಲು ಸಕಲ ಏರ್ಪಾಡುಗಳನ್ನು ಮಾಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಬರುವ ಯುವಕಲಾವಿದರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಶಾಸಕರು ಸ್ವತಃ ಪರಿಶೀಲಿಸಿ ಅಧಿಕಾರಿಗಳ ನೆರವಿನೊಂದಿಗೆ ಅಚ್ಚುಕಟ್ಟುತನದ ಯುವಜನಮೇಳ ಸಂಘಟಿಸಲು ಶ್ರಮಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications