ಚಿಮೂ 75ನೇ ಕನ್ನಡ ಸಮ್ಮೇಳನದ ಅಧ್ಯಕ್ಷ ?
ಚಿತ್ರದುರ್ಗ, ಡಿ. 15 : ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಹಿರಿಯ ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಹೆಸರನ್ನು ಕೇಂದ್ರ ಕಸಾಪಕ್ಕೆ ಶಿಫಾರಸ್ಸು ಮಾಡಲು ಸಮ್ಮೇಳನ ಸ್ವಾಗತ ಸಮಿತಿ ನಿರ್ಣಯಿಸಿದೆ.
ಸಮಿತಿ ನೇತೃತ್ವದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ಸಭೆ ನಗರದಲ್ಲಿ ಭಾನುವಾರ ನಡೆಯಿತು. ಬೆಳೆಗೆರೆ ಕೃಷ್ಣಶಾಸ್ತ್ರಿ, ಡಾ, ಎಲ್ ಬಸವರಾಜು, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಡಾ. ಎಂ ಎಂ ಕಲಬುರ್ಗಿ, ಮೌಖಿಕ ಪರಂಪರೆಯ ವಾರಸುದಾರರಾದ ಜಿಲ್ಲೆಯ ಸಿರಿಯಜ್ಜಿ, ಸಂಶೋಧಕ ಲಕ್ಷ್ಣ ತೆಲಗಾವಿ ಹೆಸರು ಕೇಳಿ ಬಂದವು. ಸಭೆಯಲ್ಲಿ ಸರ್ವಾನುಮತ ಸಾಧ್ಯವಾಗದಿದ್ದಾಗ ಬಹುಮತ ಆಧರಿಸಿ ಚಿಮೂ ಹೆಸರು ಶಿಫಾರಸ್ಸು ಮಾಡಲು ಸ್ವಾಗತ ಸಮಿತಿ ನಿರ್ಧರಿಸಿತು.
ಡಾ ಲೋಕೇಶ್ ಅಗಸನಕಟ್ಟೆ ಪ್ರತಿಕ್ರಿಯೆ ನೀಡಿ, ಬರಗೂರು, ರಾಮಚಂದ್ರಪ್ಪ, ಚಂದ್ರಶೇಖರ ಕಂಬಾರ, ಚಿಮೂ ಎಲ್ಲರೂ ಸಮನಾಗಿ ತೂಗುತ್ತಾರೆ. ಆದರೆ ಇವರೆಲ್ಲರೂ ಮುಂದೆ ಕಾಲಾವಕಾಶವಿದೆ. ಇಲ್ಲಿ ಚಿಮೂ ಹಿರಿತನವನ್ನು ಪ್ರದಾನವಾಗಿರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ಕೇಳಿಬಂದಿದ್ದರಿಂದ ಬಹುಮತದ ಮೂಲಕ ಒಬ್ಬರ ಹೆರಸನ್ನು ಮಾತ್ರ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.
ಸಾಹಿತಿ ಬಿ ಎಲ್ ವೇಣು, ಲೇಖಕ ಲೋಕೇಶ್ ಅಗಸನಕಟ್ಟೆ, ಸಂಶೋಧಕರಾದ ಶ್ರೀಶೈಲಾರಾಧ್ಯ, ಬಿ ರಾಜಶೇಖರಪ್ಪ, ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ, ಡಾ. ನಾ ಲೋಕೇಶ್, ಸಾಹಿತ್ಯ ಪರಿಚಾರಕ ಕೆ ವೆಂಕಣ್ಣಾಚಾರ್, ಪತ್ರಕರ್ತ ಜಿ ಎಸ್ ಉಜ್ಜಿನಪ್ಪ ಸೇರಿದಂತೆ ಅನೇಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
(ಸುದ್ದಿ:ವಿ.ಕ)