ಬಸ್ ದರದಲ್ಲಿ ಇಳಿಕೆ ಇಲ್ಲ: ಸಚಿವ ಅಶೋಕ್
ಪುತ್ತೂರು, ಡಿ.10: ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಇಳಿಕೆ ಆಗಿದೆ. ಬಸ್ ದರ ಇಳಿಸುತ್ತೀರಾ ಸಚಿವರೇ ಅಂದ್ರೆ ತಲೆ ಗೋಣು ಹಾಕುತ್ತಾ ಸಾಧ್ಯನೇ ಇಲ್ಲ ಅಂದುಬಿಟ್ಟರು ಅಶೋಕ್ ಸಾಹೇಬ್ರು. ನಾವು ಮಾಧ್ಯಮದ ಮಂದಿ ಸಚಿವರು ಶುಭ ಸಂದೇಶ ನೀಡುತ್ತಾರೆ ಅಂತಾ ಕಾದಿದ್ದು ವ್ಯರ್ಥವಾಯಿತು.
ಕೇಂದ್ರ ಸರ್ಕಾರದವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ ಮಾಡಿರುವುದು ಸ್ವಾಗತಾರ್ಹ. ಆದರೆ, ಇಲ್ಲಿ ಪರಿಸ್ಥಿತಿ ಬೇರೆನೇ ಇದೆ ಬಸ್ ದರ ಹೆಚ್ಚಳದಿಂದ ಬರುವ ಹಣವನ್ನು ರಾಜ್ಯ ಸಾರಿಗೆ ಸಂಸ್ಥೆ ಉದ್ಯೋಗಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುತ್ತದೆ. ಹೀಗಾಗಿ , ಈಗ ಏನು ಹೆಚ್ಚಿಗೆ ಹಣ ಜನ ನೀಡುತ್ತಿದ್ದಾರೆ. ಅದು ಜನಸೇವಕರಿಗೆ (ಸಾರಿಗೆ ಸಂಸ್ಥೆ ಉದ್ಯೋಗಿಗಳು ಅಂತಾ ಓದಿಕೊಳ್ಳಿ) ಗಳಿಗೆ ನೀಡುವುದರ ಮೂಲಕ ಹೆಚ್ಚಿನ ಕೆಲಸ ತೆಗೆಸಬಹುದು ಎಂದು ಅಶೋಕ್ ಹೇಳಿಬಿಟ್ಟರು.
ಹೋಗ್ಲಿ ಬಿಡಿ. ಕೆಎಸ್ಸಾಆರ್ಟಿಸಿ ಸಂಸ್ಥೆಗೆ ಸ್ಥಳೀಯರ ನೇಮಕಾತಿ ಆಗುತ್ತಿಲ್ಲ ಅಂತಾ ದೂರು ಬಂದಿದೆಯಲ್ಲಾ ಅದಕ್ಕೆ ಏನು ಹೇಳುತ್ತೀರಾ? ಹೌದು , ದೂರು ಬಂದಿರೋದು ನಿಜ. ಕೇಂದ್ರಿಕೃತ ನೇಮಕಾತಿ ವ್ಯವಸ್ಥೆ ಮಾಡಿರುವುದರಿಂದ ಹೀಗಾಗಿದೆ. ವಿಭಾಗ ಮಟ್ಟದಲ್ಲಿ ನೇಮಕಾತಿ ವ್ಯವಸ್ಥೆ ಮರು ಸ್ಥಾಪನೆಗೆ ಚಿಂತನೆ ನಡೆದಿದೆ. ಪ್ರಸಕ್ತ ವರ್ಷದಲ್ಲಿ 18 ಸಾವಿರ ಡ್ರೈವರ್ ಹಾಗೂ ಕಂಡಕ್ಟರ್ ಗಳನ್ನು ನೇಮಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮತ್ತದೇ ಭರವಸೆಗಳ ಮಹಾ ಪೂರ ಹರಿಸಿದ ಸಚಿವರು ಕೊಡುಗೆಗಳನ್ನು ಕೊನೆಯಲ್ಲಿ ಘೋಷಿಸಿದರು. ಉಪ್ಪಿನಂಗಡಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆಗೆ 5 ಕೋಟಿ ರು ನೀಡಲಾಗಿದೆ. ಜಿಲ್ಲೆಯಲ್ಲಿ ಈಗಿರುವ ಬಸ್ ನಿಲ್ದಾಣಗಳ ನವೀಕರಣ ಕಾರ್ಯ ಹಾಗೂ ವಿಸ್ತರಣೆಗೆ ಸುಮಾರು 2.5 ಕೋಟಿ ರುವ್ಯಯಿಸಲಾಗುವುದು. ಮಂಗಳೂರು-ಮಣಿಪಾಲ್ ನಡುವೆ ವೋಲ್ವೊ ಬಸ್ ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿ ಸಚಿವರು ಸುದ್ದಿಗೋಷ್ಠಿಗೆ ಮುಕ್ತಾಯ ಹಾಡಿದರು.