ಕೆಎಂಎಫ್ ಲೆಕ್ಕ ಪರಿಶೀಲನೆಯಲ್ಲಿ ರಾಜಕೀಯ?
ಬೆಂಗಳೂರು, ಡಿ. 10 : ಕೆಎಂಎಫ್ ಲೆಕ್ಕ ಪರಿಶೀಲನೆ ನಡೆಸಿರುವುದರಲ್ಲಿ ರಾಜಕೀಯ ದುರುದ್ದೇಶ ಏನಾದರೂ ಇದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರಿದ್ದ ಏಕಸದಸ್ಯ ಪೀಠ ಕೆಎಂಎಫ್ ಅಧ್ಯಕ್ಷ ಎಚ್ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಹಾಲಿನ ದರದ ಮೇಲಿನ ಸಬ್ಸಿಡಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕೆಎಂಫ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ನಂತರ ಸರ್ಕಾರ ಕೆಎಂಎಫ್ ಲೆಕ್ಕ ಪರಿಶೀಲನೆಗೆ ಮುಂದಾಗಿರುವುದು ಏಕೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ. ಲೆಕ್ಕ ಪರೀಶಲನೆ ಮಾಡಿರುವುದರಲ್ಲಿ ರಾಜಕೀಯ ದುರುದ್ದೇಶ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದ್ದರಿಂದ ಲೆಕ್ಕ ಪರಿಶೀಲನೆ ಮಾಡಿರುವುದಕ್ಕೆ ಶೀಘ್ರವೇ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ರೇವಣ್ಣ ನಡುವೆ ತೀವ್ರ ಹಗ್ಗಜಗ್ಗಾಟ ಉಂಟಾಗಿತ್ತು. ಸರ್ಕಾರ ದರ ಏರಿಕೆ ಬೇಡ ಎಂದರೆ, ಸಂಸ್ಥೆ ನಷ್ಟದಲ್ಲಿದೆ, ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ರೇವಣ್ಣ ಸಮರ್ಥಿಸಿಕೊಂಡಿದ್ದರು. ಇದು ಇಬ್ಬರು ನಾಯಕರ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತ್ತು. ಸರ್ಕಾರದ ಕ್ರಮ ವಿರೋಧಿಸಿ ರೇವಣ್ಣ ಹೈಕೋರ್ಟ್ ಮೊರೆ ಹೋಗಿದ್ದರು.
(ದಟ್ಸ್ ಕನ್ನಡ ವಾರ್ತೆ)