ಅನಿತಾರನ್ನು ದ್ರೌಪದಿಗೆ ಹೋಲಿಸಿದ್ದು ಸರಿಯಲ್ಲ
ರಾಯಚೂರು, ಡಿ. 9 : ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿರುವ ಅನಿತಾ ಕುಮಾರಸ್ವಾಮಿ ಅವರನ್ನು ದ್ರೌಪದಿಗೆ ಹೋಲಿಸಿ ಟೀಕಿಸಿರುವ ಬಿಜೆಪಿ ಪಕ್ಷದ ವಕ್ತಾರರ ಕ್ರಮಕ್ಕೆ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಅನಿತಾ ಕುಮಾರಸ್ವಾಮಿ ಅವರನ್ನು ದ್ರೌಪದಿಗೆ ಹೋಲಿಸಿರುವುದು ಬಿಜೆಪಿ ಪಕ್ಷದ ಸಾಂಸ್ಕೃತಿಕ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣವನ್ನು ಮಾಡುವುದು ಸರಿಯಲ್ಲ ಎಂದು ಧನಂಜಯಕುಮಾರ್ ಅವರ ಟೀಕೆಗೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದೆ , ಏನೆಲ್ಲಾ ಹೇಳಿಕೆ ನೀಡುತ್ತಿದೆ. ಅನಿತಾ ಕುಮಾರಸ್ವಾಮಿ ಬಗೆಗಿನ ಹೇಳಿಕೆಯನ್ನು ಸಮಾಜದ ಎಲ್ಲ ಮಹಿಳೆಯರು ಖಂಡಿಸಿಬೇಕು ಎಂದು ಆಕ್ರೋಷ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷವನ್ನು ನಾವು ಕೂಡಾ ವಿರೋಧಿಸುತ್ತೇವೆ. ಆ ಪಕ್ಷವನ್ನು ಸೋಲಿಸುವ ಪಣವನ್ನು ತೊಟ್ಟಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಬಗ್ಗೆ ಹಲವಾರು ಟೀಕೆ ಟಿಪ್ಪಣಿಗಳನ್ನು ಮಾಡುತ್ತೇವೆ, ಅವರನ್ನು ಕಳೆದ ಹತ್ತು ವರ್ಷಗಳಿಂದ ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದೇವೆ. ಅದನ್ನು ಮುಂದುವರೆಸುತ್ತೇವೆ ಕೂಡಾ, ಆದರೆ ಬಿಜೆಪಿಯಂಥ ಕೀಳು ಮಟ್ಟದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಹೇಳಿದರು.
ಅನಿತಾ ಕುಮಾರಸ್ವಾಮಿ ಇಂಜಿನಿಯರ್ ಪದವೀಧರೆ. ಎಂದಿಗೂ ರಾಜಕೀಯಕ್ಕೆ ಬರಬೇಕು ಎಂದು ಬಯಸಿದವರಲ್ಲ. ಕೆಲ ಅನಿವಾರ್ಯ ಕಾರಣಗಳಿಂದ ಇದೀಗ ಅವರು ಸ್ಪರ್ಧಿಸಿರಬಹುದು. ಆದರಲ್ಲಿ ಯಾವ ತಪ್ಪೂ ಇಲ್ಲ. ಅವರನ್ನು ಸೋಲಿಸಲು ತಂತ್ರ ಹೆಣೆಯಬೇಕೆ ಹೊರತು, ವ್ಯಕ್ತಿಗತ ಟೀಕೆ ಮಾಡುವುದು ಸರಿಯಲ್ಲ ಎಂದು ಶಿವಕುಮಾರ್ ಬಿಜೆಪಿ ಮುಖಂಡರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications