ಮಾನವ ಹಕ್ಕು ಹೋರಾಟಗಾರರೇ ಎಲ್ಲಿದ್ದೀರಿ ?
ಬೆಂಗಳೂರು, ಡಿ. 9 : ಸಮಾಜಘಾತುಕ ಶಕ್ತಿಗಳಾದ ಉಗ್ರರು ಮತ್ತು ನಕ್ಸಲಿಯರು ಅಮಾಯಕರನ್ನು ಹತ್ಯೆಗೈದಾಗ ಮಾನವ ಹಕ್ಕು ಹೋರಾಟಗಾರರು ಬಾಯಿ ಬಿಚ್ಚುವುದಿಲ್ಲ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ತಾಲ್ಲೂಕು ಹಳ್ಳಿ ಹೊಳೆಯಲ್ಲಿ ನಕ್ಸಲರು ಪ್ರಗತಿಪರ ರೈತ ಕೇಶವ ಯಡಿಯಾಳ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಂತಹ ಘಟನೆ ನಡೆದಾಗ ಬುದ್ಧಜೀವಿ ಹಾಗೂ ಮಾನವ ಹಕ್ಕು ಹೋರಾಟಗಾರರು ಚಕಾರ ಎತ್ತುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಮುಂಬೈ ಘಟನೆಗೂ ಇವರ ಸೊಲ್ಲೆತ್ತುವುದಿಲ್ಲ., ವಾಸ್ತವವಾಗಿ ಸಮಾಜಘಾತುಕ ಶಕ್ತಿಗಳು ನಿಗ್ರಹಕ್ಕೆ ಮಾಧ್ಯಮಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯ . ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಶಸ್ತ್ರ ತ್ಯಜಿಸಿ ಪುನರ್ವಸತಿಗೆ ಆಸಕ್ತಿ ವಹಿಸಿದರೆ ಮಾತುಕತೆಗೆ ಸರ್ಕಾರ ಸಿದ್ಧ. ಅವರ ಸಮಸ್ಯೆ ಏನೆಂಬುದನ್ನು ತಿಳಿಸಲಿ. ಮಲೆನಾಡು ಭಾಗದಲ್ಲಿ ಕೃಷಿಕರಿಗೆ, ಕಾರ್ಮಿಕರಿಗೆ ಶೋಷಣೆ ನಡೆಯುತ್ತಿದೆ ಎಂದರೆ ಒಪ್ಪಲಾಗದು. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ದಿನಕ್ಕೆ 150 ರು. ಕೂಲಿ ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಆದರೆ, ಅದೊಂದು ಸಮಸ್ಯೆ ಎಂದು ನಕ್ಸಲರು ಹೋರಾಟದ ಮುಖವಾಡ ಹಾಕಿ ಅಮಾಯಕರನ್ನು ಹತ್ಯೆ ಮಾಡುವುದು ಸರ್ಕಾರ ಸಹಿಸುವುದಿಲ್ಲ ಎಂದು ಆಚಾರ್ಯ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)