ಬೆಳಗಾವಿಯಲ್ಲಿ ಉಮೇಶ್ ಕತ್ತಿ ನಾಮಪತ್ರ ಸಲ್ಲಿಕೆ
ಬೆಳಗಾವಿ:ಡಿ:9: ಉಪಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳು ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು.
ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಮೇಶ ವಿಶ್ವನಾಥ ಕತ್ತಿ (ಭಾರತೀಯ ಜನತಾ ಪಕ್ಷ-2 ಸೆಟ್ಟುಗಳಲ್ಲಿ), ರಮೇಶ ವಿಶ್ವನಾಥ ಕತ್ತಿ (ಭಾರತೀಯ ಜನತಾ ಪಕ್ಷ ಹಾಗೂ ಪಕ್ಷೇತರ) ಮತ್ತು ಜಯಪ್ರಕಾಶ ನಾರಾಯಣ ನಲವಡೆ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಇವರು ಸೋಮವಾರ ಹುಕ್ಕೇರಿ ತಹಸೀಲದಾರ ಕಚೇರಿಯಲ್ಲಿ ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಗಳಾದ ಸತೀಶ ಅವರಿಗೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಈವರೆಗೆ ಒಟ್ಟು ಮೂವರು ಅಭ್ಯರ್ಥಿಗಳು ಐದು ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ ಪಾಂಡಪ್ಪ ಹಣಜಿ (ಪಕ್ಷೇತರ), ಶಿವಶಂಕರ ಸಾತಪ್ಪಾ ಖಾನಾಪೂರ (ಪಕ್ಷೇತರ), ಮೋಹನ ಹನುಮಂತ ಗಾಡಿವಡ್ಡರ (ಪಕ್ಷೇತರ), ಅರವಿಂದ ಮಹಾದೇವರಾವ ದಳವಾಯಿ (ಜನತಾದಳ ಜಾತ್ಯಾತೀತ) ಹಾಗೂ ಬಾಲಚಂದ್ರ ಲಕ್ಷ್ಮಣರಾವ ಜಾರಕಿಹೊಳಿ (ಭಾರತೀಯ ಜನತಾ ಪಕ್ಷ-2 ಸೆಟ್ಟುಗಳಲ್ಲಿ) ತಮ್ಮ ನಾಮಪತ್ರಗಳನ್ನು ಗೋಕಾಕ ತಹಸೀಲದಾರ ಕಚೇರಿಯಲ್ಲಿ ಚುನಾವಣಾಧಿಕಾರಿಗಳಾದ ಶ್ರೀನಿವಾಸ ಅವರಿಗೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಈವರೆಗೆ ಐವರು ಅಭ್ಯರ್ಥಿಗಳ ಏಳು ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
(ದಟ್ಸ್ ಕನ್ನಡವಾರ್ತೆ)