ಮುಂಬೈ ಭಯೋತ್ಪಾದನೆ ನಾವು ಕಾರಣ ಅಲ್ಲ
ನವದೆಹಲಿ, ಡಿ. 5 : ಮುಂಬೈ ಭಯೋತ್ಪಾದನೆಗೂ, ಲಷ್ಕರ್ ಇ ತೊಯ್ಬಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಲಷ್ಕರ್ ಇ ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ಸ್ಪಷ್ಟಪಡಿಸಿದ್ದಾರೆ. ಭಾರತದ ಬೇಹುಗಾರಿಕೆ ಇಲಾಖೆ ಭಯೋತ್ಪಾದಕ ಸುಳಿವನ್ನ ಪತ್ತೆಹಚ್ಚುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ವಿನಾಕಾರಣ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಯೀದ್ ತಿರುಗೇಟು ನೀಡಿದ್ದಾರೆ
ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ಭದ್ರತಾ ವೈಫಲ್ಯವನ್ನು ಬಿಡಿಬಿಡಿಯಾಗಿ ಸಯೀದ್ ಬಿಚ್ಚಿಟ್ಟಿದ್ದಾನೆ. ಭಾರತೀಯರು ಮುಂಬೈ ಭಯೋತ್ಪಾದನೆ ತೀವ್ರ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ತನ್ನ ಭದ್ರತಾ ವೈಫಲ್ಯವನ್ನು ಮರೆಮಾಚಲು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಲಷ್ಕರ್ ಇ ತೊಯ್ಬಾ ಸಂಘಟನೆ ಮೇಲೂ ಸಂಶಯ ವ್ಯಕ್ತಪಡಿಸಿದೆ. ಆದರೆ ಮುಂಬೈ ಘಟನೆಗೂ ನಮ್ಮ ಸಂಘಟನೆಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ ಎಂದು ಸಯೀದ್ ಖಡಾಖಂಡಿತಾವಗಿ ನಿರಾಕರಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸವಾಗಿರುವ ಲಷ್ಕರ್ ಇ ತೊಯ್ಬಾ ಸಂಘಟನೆ ವಕ್ತಾರರು ಕೂಡಾ ಮುಂಬೈ ಭಯೋತ್ಪಾದನೆಯನ್ನು ಅಲ್ಲಗಳೆದಿದ್ದಾರೆ. ಲಷ್ಕರ್ ಸಂಘಟನೆ ಕಾಶ್ಮೀರದ ಸ್ವತಂತ್ರಕ್ಕಾಗಿ ಹೋರಾಟ ನಡೆಸುತ್ತೇವೆಯೇ ಹೊರತು ಸಾರ್ವಜನಿಕರ ಜೀವ ಹಾನಿ ಮಾಡುವಂತ ಕೃತ್ಯ ಇಳಿಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಲಷ್ಕರ್ ಇ ತೊಯ್ಬಾ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ಗಡಿ ಭಾಗದ ಕುನೂರು ಪ್ರಾಂತ್ಯದಲ್ಲಿ ನೆಲೆಸಿದ್ದಾನೆ. ಲಷ್ಕರ್ ಸಂಘಟನೆ ದಕ್ಷಿಣ ಏಷ್ಯಾದ ಅತೀ ದೊಡ್ಡ ಭಯೋತ್ಪಾದನಾ ಸಂಘಟನೆಯಾಗಿದೆ. ಈ ಸಂಘಟನೆಯನ್ನು ಭಾರತ, ಪಾಕಿಸ್ತಾನ, ಅಮೆರಿಕ, ಬ್ರಿಟನ್, ರಷ್ಯಾ ಮತ್ತು ಆಸ್ಟ್ರೇಲಿಯಾ ದೇಶದಲ್ಲಿ ನಿಷೇಧ ಹೇರಲಾಗಿದೆ. ನಿಷೇಧ ಹೇರಿದ್ದರಿಂದ ಲಷ್ಕರ್ ಸಂಘಟನೆಯು ಜಮಾತೆ-ಉಲ್-ದಾವಾ(ಜೆಯುಡಿ) ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)