ಇಂಗದ ದಾಹದ ತಂಗಮಣಿ ಕರುಣಾನಿಧಿ
ಬೆಂಗಳೂರು, ಡಿ.5 : ಉದ್ದೇಶಿತ ಹೊಗೇನಕಲ್ಲು ನೀರಾವರಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿಗಳ ಜೊತೆ ಮಾತುಕತೆಯ ಅವಶ್ಯಕತೆ ತಮಗಿಲ್ಲ. ಹೊಗೇನಕಲ್ಲು ತಮಿಳುನಾಡಿನ ಸ್ವತ್ತು. ಅಷ್ಟೆ ಅಲ್ಲ. ತಕ್ಷಣವೇ 12.5 ಟಿ.ಎಂ.ಸಿ ಕಾವೇರಿ ನೀರು ಬಿಡುಗಡೆಮಾಡಿ.
ಹೀಗಂತ ಇನ್ಯಾರು ಹೇಳುತ್ತಾರೆ. ನಿಮ್ಮ ಊಹೆ ಸರಿ. ಆತಂಕವಾದ, ಭದ್ರತೆಯ ಮಂತ್ರಗಳನ್ನು ಜಪಿಸುವ ಇಂದಿನ ಭಾರತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಈ ಮೇಲಿನಂತೆ ಹೇಳಿಕೆ ನೀಡಿ ಎರಡು ರಾಜ್ಯಗಳ ನಡುವಿನ ಬೆಂಕಿಗೆ ಪೆಟ್ರೋಲು ಸುರಿದ್ದಾರೆ. ಪೆಟ್ರೋಲ್ ಬೆಲೆ ಇಳಿಯುತ್ತಿರುವ ಸುದ್ದಿಯನ್ನು ಕರುಣಾ ಓದಿರಬೇಕು. ಬೆಂಕಿ ಬಿದ್ದರೆ ಅಗ್ನಿಶಾಮಕ ದಳದ ಟ್ಯಾಂಕರುಳಿಗೆ ನೀರು ಬೇಕು. ಆದಕಾರಣ ಯಡಿಯೂರಪ್ಪನವರೇ, ಸದ್ಯಕ್ಕೆ ಕನ್ನಂಬಾಡಿ ಕಟ್ಟೆಯ ಗೇಟುಗಳ ಬೀಗ ತೆಗೀಬೇಡೀ.
ಎರಡು ರಾಜ್ಯಗಳ ಈ ವಿವಾದದಲ್ಲಿ ನಮಗೆ ಯಾವುದೇ ರೀತಿಯ ತೊಂದರೆಗಳು ಕಾಣಿಸುತ್ತಿಲ್ಲ. 1968 ರಲ್ಲಿ ಎರಡು ರಾಜ್ಯಗಳ ನಡುವಣ ಒಪ್ಪಂದದ ಪ್ರಕಾರ ಹೊಗೇನಕಲ್ ತಮಿಳುನಾಡು ರಾಜ್ಯದ ಆಸ್ತಿ ಎಂದು ಸಾಬೀತಾಗಿದೆ. ಹೊಗೇನಕಲ್ಲು ತಮ್ಮದೆಂದು ಹೇಳುವ ಕರ್ನಾಟಕಕ್ಕೆ ಈ ನೀರಾವರಿ ಯೋಜನೆ ತಡೆಯುವ ಯತ್ನ ಕಾನೂನು ಪ್ರಕಾರ ಅಥವಾ ನೈತಿಕವಾಗಿ ಇಲ್ಲ ಎನ್ನುವುದು ಕರುಣಾ ಹೂಡಿರುವ ವಾದ.
(ದಟ್ಸ್ ಕನ್ನಡ ವಾರ್ತೆ)