ಛಗನ್ ಭುಜಬಲ ಮಹಾರಾಷ್ಟ್ರ ಡಿಸಿಎಂ
ಮುಂಬೈ, ಡಿ. 5 : ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ಛಗನ್ ಭುಜಬಲ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರು ಭುಜಬಲ ಆಯ್ಕೆಯನ್ನು ಪ್ರಕಟಿಸಿದರು. ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಗೃಹ ಖಾತೆಯನ್ನೂ ಭುಜಬಲ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮುಂಬೈ ಭಯೋತ್ಪಾದನೆ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್ ಆರ್ ಪಾಟೀಲ್ ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಉಪಮುಖ್ಯಮಂತ್ರಿ ಹುದ್ದೆಗೆ ತೀವ್ರ ಚರ್ಚೆ ನಡೆಸಿದ ನಂತರ ಪಕ್ಷದ ಹಿರಿಯ ನಾಯಕರಾಗಿರುವ ಛಗನ್ ಭುಜಬಲ ಅವರ ಅಯ್ಕೆ ಸೂಕ್ತ ಎಂದು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷಕ್ಕೆ ಸಮರ್ಥ ನಾಯಕ ಬೇಕಿರುವ ಹಿನ್ನೆಲೆಯಲ್ಲಿ ಭುಜಬಲ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಮುಂಬೈ ಭಯೋತ್ಪಾದನೆ ನಂತರ ಆರ್ ಆರ್ ಪಾಟೀಲ್ ದೊಡ್ಡ ನಗರಗಳಲ್ಲಿ ಇಂತಹ ಚಿಕ್ಕ ಪುಟ್ಟ ಘಟನೆಗಳು ನಡೆಯುವುದು ಸಹಜ ಎಂದು ಲಘುವಾಗಿ ಹೇಳಿಕೆ ನೀಡಿದ್ದರು. ಇದು ಮಹಾರಾಷ್ಟ್ರದಲ್ಲಿ ವ್ಯಾಪಕ ವಿರೋಧ ಟೀಕೆಗೆ ಕಾರಣವಾಗಿತ್ತು. ಅಲ್ಲದೇ ರಾಜೀನಾಮೆಗೆ ತೀವ್ರ ಒತ್ತಡ ಆರಂಭವಾಗಿತ್ತು. ಒತ್ತಡಕ್ಕೆ ಮಣಿದ ಪಾಟೀಲ್ ರಾಜೀನಾಮೆ ನೀಡಿದ್ದರು. ಇನ್ನೊಂದೆಡೆ ಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಂದುವೆರೆದಿದೆ. ನಾಂದೇಡೆ ಶಾಸಕರ ಹಾಗೂ ಪಕ್ಷದ ಹಿರಿಯ ಮುಖಂಡ ಅಶೋಕ್ ಚವಾಣ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಸಂಜೆ ವೇಳೆ ಮಹಾರಾಷ್ಟ್ರದ ನೂತನ ಸಿಎಂ ಘೋಷಣೆಯಾಗುವ ಸಾಧ್ಯತೆ ಇದೆ.
(ದಟ್ಸ್ ಕನ್ನಡ ವಾರ್ತೆ)