ಡಿ. 9ರಂದು ಬಕ್ರೀದ್ ರಜೆ: ಶೋಭಾ
ಬೆಂಗಳೂರು, ಡಿ. 5 : ಬಕ್ರೀದ್ ಹಬ್ಬದ ಆಚರಣೆಯನ್ನು ಡಿಸೆಂಬರ್ 8 ರ ಬದಲಾಗಿ ಡಿಸೆಂಬರ್ 9 ರಂದು ಆಚರಿಸುತ್ತಿರುವ ಕಾರಣ ಡಿಸೆಂಬರ್ 9 ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಂಪುಟದ ತೀರ್ಮಾನಗಳನ್ನು ಕುರಿತಂತೆ ಪತ್ರಕರ್ತರಿಗೆ ವಿವರವನ್ನು ನೀಡಿದರು. ಬಳ್ಳಾರಿಯ ವಿಜಯನಗರ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. 43 ಗ್ರಾಮಗಳನ್ನು ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಲಾಗಿದ್ದು, ಕೈಗಾರಿಕೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಈ ಕ್ರಮಕ್ಕೆ ಸಂಪುಟ ಸಮ್ಮತಿಸಿದೆ ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸಮಾಡುವ 144 ಸಾತ್ನಕೋತ್ತರ ಪದವೀಧರರಾದ ಸಿಬ್ಬಂದಿ ವರ್ಗವನ್ನು ಕಾಲೇಜಿನ ಬೋಧಕ ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಅದರಂತೆ ಮಂಡ್ಯದಲ್ಲಿ 10, ಬೆಳಗಾವಿ 27, ಬೀದರ್ 13, ಶಿವಮೊಗ್ಗ 23, ರಾಯಚೂರು ಜಿಲ್ಲೆ 12, ಬೆಂಗಳೂರು 27 ಮೈಸೂರು 20, ಹಾಸನ 12, ಹೀಗೆ ಒಟ್ಟಾರೆ 144 ಬೋಧಕ ಸ್ಥಾನಗಳಿಗೆ ಹೊರಗಿನಿಂದ ಸೇವೆ ಪಡೆಯುವ ಬದಲಾಗಿ ಇಲಾಖೆಯಲ್ಲೇ ಲಭ್ಯವಿರುವ ಸಿಬ್ಬಂದಿಯ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
2008-09 ನೇ ಸಾಲಿನಲ್ಲಿ ಮೆಕ್ಕೆಜೋಳ ಮತ್ತು ಬಿಳಿಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಭಾಗವನ್ನು ಗಮನದಲ್ಲಿಟ್ಟು ಕ್ವಿಂಟಾಲ್ಗೆ ರೂ 840 ರಂತೆ ಸರ್ಕಾರದಿಂದ ಖರೀದಿಸುವ ನಿರ್ಧಾರ ಮಾಡಿದ್ದು, ಮಾರ್ಕೆಟಿಂಗ್ ಫೆಡರೇಷನ್ ಮುಖಾಂತರ ಖರೀದಿ ಕೇಂದ್ರಗಳ ಸ್ಥಾಪನೆ ಮುಖ್ಯವಾಗಿ ದಾವಣಗೆರೆ, ಹಾವೇರಿ, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)