ಹೈದರಾಬಾದಲ್ಲಿ ಪೊಲೀಸರ ಮೇಲೆ ಉಗ್ರರ ದಾಳಿ
ಹೈದರಾಬಾದ್, ಡಿ. 3 : ಅಡಗಿರುವ ಭಯೋತ್ಪಾದಕ ಶೋಧನೆಗೆ ಬಂದ ಪೊಲೀಸರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗರೆದು ನಾಲ್ವರು ಉಗ್ರರು ಪರಾರಿಯಾಗಿರುವ ಘಟನೆ ಹೈದರಾಬಾದ್ ನ ಸಂತೋಷ ನಗರದಲ್ಲಿ ಇಂದು ಮಧ್ಯಾಹ್ನ ಜರುಗಿದೆ. ಉಗ್ರರು ಸಿಮಿ ಸಂಘಟನೆಗೆ ಸೇರಿದವರಿರಬಹುದೆಂದು ಶಂಕಿಸಲಾಗಿದೆ.
ಕಳೆದ ವರ್ಷ ನಡೆದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ವಿಕಾರುದ್ದಿನ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ. ಆತನೊಂದಿಗೆ ಇದ್ದ ಮೂರು ಜನರು ಕೂಡ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಜನನಿಬಿಡ ಪ್ರದೇಶವಾದ ಸಂತೋಷ ನಗರದಲ್ಲಿರುವ ಹಾರ್ಡವೇರ್ ಅಂಗಡಿಯೊಂದರಲ್ಲಿ ವಿಕಾರುದ್ದಿನ್ ಸಹಚರರೊಂದಿಗೆ ಅಡಗಿದ್ದಾನೆ ಎಂಬ ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಹೈದರಾಬಾದ್ ಪೊಲೀಸರು ಮನೆ ಮನೆಗೂ ತೆರಳಿ ಶೋಧಕಾರ್ಯ ಆರಂಭಿಸಿದ್ದಾರೆ. ಆಗ ಮನೆಯೊಂದರಲ್ಲಿ ಅಡಗಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್ ಪೇದೆಯ ಮೇಲೆ ವಿಕಾರುದ್ದಿನ್ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ರಾಮರಾಜು ಎಂಬ ಪೇದೆ ತೀವ್ರವಾಗಿ ಗಾಯಗೊಂಡಿದ್ದಾರೆ. ಆತನನ್ನು ಅಪೋಲೋ ಡಿಆರ್ ಡಿಓ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಉಗ್ರರನ್ನು ಬಂಧಿಸಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಬುಧವಾರ ಮುಂಬೈ ಭಯೋತ್ಪಾದನೆಯಿಂದ ತತ್ತರಿಸಿದ್ದ ಭಾರತ ಇದೀಗ ಮತ್ತೆ ಹೈದರಾಬಾದ್ ನಲ್ಲಿ ಮತ್ತೆ ಉಗ್ರರು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಪೊಲೀಸರು ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ತನಿಖೆ ನಡೆಸಬೇಕಾಗಿದೆ ಎಂದಷ್ಟೆ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)