ವಿದ್ಯುತ್ ಕದ್ದರೆ ಕಠಿಣ ಕ್ರಮ ಯಡಿಯೂರಪ್ಪ
ಶಿವಮೊಗ್ಗ, ನ. 20 : ವಿದ್ಯುತ್ ಕಳ್ಳತನ ಮಾಡುವ ಕೈಗಾರಿಕೋದ್ಯಮಿಗಳಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಕೃಷ್ಣ ಕಚೇರಿಯಲ್ಲಿ ನಡೆದ ವಿದ್ಯುತ್ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೂಡಾ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದಲ್ಲಿ ಗುರುವಾರ ಮಾಧ್ಯ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಕರಣದಲ್ಲಿ ಅನೇಕ ಕೈಗಾರಿಕೋದ್ಯಮಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಇಂತಹವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಉಗ್ರ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಅಂತಿಮ ಎಚ್ಚರಿಕೆ ನೀಡಿದರು. ವಿದ್ಯುತ್ ನ್ನು ಸಮರ್ಪಕವಾಗಿ ಒದಗಿಸುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂದು ದೂರಿದ ಯಡಿಯೂರಪ್ಪ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ವಿದ್ಯುತ್ ಇಲಾಖೆ ಜಾಗೃತಿ ದಳ ಕಳೆದ ಅಕ್ಟೋಬರ್ ನಲ್ಲಿ 5 ಸಾವಿರ ಘಟಕಗಳ ಮೇಲೆ ದಾಳಿ ನಡೆಸಿ, 1 ಸಾವಿರ ಘಟಕಗಳಲ್ಲಿ ವಿದ್ಯುತ್ ಕಳ್ಲತನ ಆಗಿರುವುದನ್ನು ಪತ್ತೆ ಹಚ್ಚಿದ್ದರು. 2.57 ಕೋಟಿ ರು ಗಳ ದಂಡವನ್ನು ವಿಧಿಸಲಾಗಿದೆ. ವಿದ್ಯುತ್ ಕಳ್ಳತನ ಮತ್ತು ಸೋರಿಕೆ ತಡೆಯಲು ರಾಜ್ಯಾದ್ಯಂತ ತೀವ್ರ ದಾಳಿ ಮುಂದುವರೆಸಿದ್ದು, ಈ ದಾಳಿಗಾಗಿ ಎಲ್ಲ ವಿದ್ಯುತ್ ಕಂಪನಿಗಳಲ್ಲಿ ವಿಶೇಷ ಜಾಗೃತದಳವನ್ನು ರಚಿಸಲಾಗಿದೆ ಎಂದು ಮತ್ತೊಮ್ಮೆ ಪುನರುಚ್ಚಾರ ಮಾಡಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications