ದಾವಣಗೆರೆ ಅಂತರ್ಜಾಲ ತಾಣ ಲೋಕಾರ್ಪಿತ
ದಾವಣಗೆರೆ, ನ.3: 'ಜನಸ್ಪಂದನ' ಕಾರ್ಯಕ್ರಮದ ಮೂಲಕ ಹರಿದು ಬಂದ ದುಃಖ ದುಮ್ಮಾನಗಳನ್ನು ಬಗೆಹರಿಸುವಲ್ಲಿ ಇಡೀ ರಾಜ್ಯದಲ್ಲಿ ದಾವಣಗೆರೆ ಜಿಲ್ಲಾಡಳಿತ ಮಾದರಿ ಜಿಲ್ಲೆ ಎನ್ನಿಸಿಕೊಂಡಿದೆ.ಇದುವರೆಗೂ ಜಿಲ್ಲೆಯಾದ್ಯಂತ 25 ಜನಸ್ಪಂದನ ಕಾರ್ಯಕ್ರಮಗಳು ನಡೆದಿದ್ದು 85,819 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 49,398 ಅರ್ಜಿಗಳನ್ನು ತ್ವರಿತವಾಗಿ ಬಗೆಹರಿಸುವ ಮೂಲಕ ದಾವಣಗೆರೆ ಜಿಲ್ಲಾಡಳಿತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎಸ್.ಎ.ರವೀಂದ್ರನಾಥ್ ವಿವರ ನೀಡಿದರು. ಸಾರ್ವಜನಿಕರ ದೂರು, ಸಮಸ್ಯೆಗಳನ್ನು ದಾವಣಗೆರೆ ಜಿಲ್ಲಾಡಳಿತ ತ್ವರಿತವಾಗಿ ಪರಿಹರಿಸಿದೆ. ದೀನ ದಲಿತರ ಸಮಸ್ಯೆಗಳಿಗೆ ಅಧಿಕಾರಿಗಳು ತೀವ್ರವಾಗಿ ಸ್ಪಂದಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಡಳಿತದ ಅಂತರ್ಜಾಲ ತಾಣವನ್ನು http://stg1.kar.nic.in/davangere/ ಅನಾವರಣಗೊಳಿಸಿದರು.
ಜಿಲ್ಲೆಯಲ್ಲಿ 13,119 ಕ್ವಿಂಟಾಲ್ ಬಿತ್ತನೆ ಬೀಜ ಖರೀದಿಸಲು ರು.198 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ಇದರಿಂದ 95,917 ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದೆ. ಹಾಗೆಯೇ ರೈತರು ತಮ್ಮ ಹೊಲಗಳಲ್ಲಿ ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಳ್ಳಲು ರು.1.85 ಲಕ್ಷ ಬಿಡುಗಡೆ ಮಾಡಿರುವುದಾಗಿ ಕೃಷಿ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಮಾತನಾಡುತ್ತಾ, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿ ವಿವರಗಳು, ಪರಿಹರಿಸಲಾದ ದೂರುಗಳು ಹಾಗೂ ಸರ್ಕಾರದ ವಿವಿದ ಯೋಜನೆಗಳನ್ನು ಅಂತರ್ಜಾಲ ತಾಣದಲ್ಲಿ ನೀಡಲಾಗಿದೆ. ಸಂಧ್ಯಾಸುರಕ್ಷಾ ಯೋಜನೆಗಾಗಿ 49,398 ಅರ್ಜಿಗಳು ಬಂದಿದ್ದು 18,449 ಮಂದಿ ಅದರ ಲಾಭ ಪಡೆದಿದ್ದಾರೆ. 1,780 ಅಂಗವಿಕಲರು ಹಾಗೂ 1,266 ಮಂದಿ ಹಿರಿಯ ನಾಗರಿಕರಿಗೆ ಪಿಂಚಣಿ ನೀಡಲಾಗಿದೆ. 2,810 ಮಹಿಳೆಯರು ವಿಧವಾ ವೇತನ ಯೋಜನೆಯ ಲಾಭ ಪಡೆದಿದ್ದಾರೆ ಎಂದುಜಿಲ್ಲಾಧಿಕಾರಿಗಳು ವಿವರ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಮತಾಂತರ ಆರೋಪ:ಬಾಡಾ ಗ್ರಾಮದ ಚರ್ಚ್ ಧ್ವಂಸ
ಆ.20ರಂದು ದಾವಣಗೆರೆ ಬಂದ್ಗೆ ಎಸ್ಎಫ್ಐ ಕರೆ
ದಾವಣಗೆರೆಯ ಬಾಯಿ ಚಪ್ಪರಿಸುವ ತಿಂಡಿ ಬೇಕೆ?












Click it and Unblock the Notifications