ಹಿಂದು ಜಾಗರಣ ಮಂಚ್ ನಿಷೇಧಿಸಿ: ಬೃಂದಾ
ನವದೆಹಲಿ, ಅ. 23 : ಇತ್ತೀಚೆಗೆ ಮಾಲೇಗಾಂವ್ ಹಾಗೂ ಮೋದಸಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹಿಂದುಪರ ಸಂಘಟನೆಗಳಾದ ಭಜರಂಗದಳ ಹಾಗೂ ಹಿಂದೂ ಜಾಗರಣ ಮಂಚ್ ನ ಕೈವಾಡವಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ರಾಜ್ಯಸಭೆಯಲ್ಲಿಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬೃಂದಾ ಕಾರಟ್, ಮಹಾರಾಷ್ಟ್ರದ ಮಾಲೇಗಾಂವ್ ಹಾಗೂ ಗುಜರಾತಿನ ಮೋದಸಾದಲ್ಲಿ ನಡೆದ ಸ್ಫೋಟದಲ್ಲಿ ಭಜರಂಗದಳ ಹಾಗೂ ಹಿಂದೂ ಜಾಗರಣ ಮಂಚ್ ನ ಕಾರ್ಯಕರ್ತರ ಕೈವಾಡವಿದೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿದೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ ನಡೆಸಿದ ತನಿಖೆಯಿಂದ ಭಜರಂಗದಳದ ಕೈವಾಡವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಕೂಡಲೇ ಈ ಎರಡು ಜನವಿರೋಧಿ ಹಿಂದು ಸಂಘಟನೆಗಳನ್ನು ನಿಷೇಧಕ್ಕೆ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೂ ಮುನ್ನ ಮಾಲೆಗಾಂವ್ ಮತ್ತು ಮೋದಸಾ ದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದರು ಬಂಧನವಾಗಿರುವ ಸಿಮಿ ಸಂಘಟನೆ ಕಾರ್ಯಕರ್ತರಿಗೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ, ತಕ್ಷಣ ಬೃಂದಾ ಕಾರಟ್ ಈ ರೀತಿ ಪ್ರತಿಕ್ರಿಯಿಸಿದರು.
ದೇಶಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ದಮನ ಮಾಡುವುದು ಅತೀ ಅವಶ್ಯವಾಗಿದೆ. ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವ ಯಾರೇ ಆದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಿಮಿ ಸಂಘಟನೆಯಾಗಲಿ, ಭಜರಂಗದಳವಾಗಲಿ ಅಪರಾಧ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಆದ್ದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗಿರುವ ಭಜರಂಗದಳ ಹಾಗೂ ಹಿಂದೂ ಜಾಗರಣ ಮಂಚ್ ಮೇಲೆ ನಿಷೇಧ ಹೇರಬೇಕು ಅವರು ಸರ್ಕಾರವನ್ನು ಒತ್ತಾಯಿಸಿದರು.
ಹಿಂದುಪರ ಸಂಘಟನೆಗಳ ನಿಷೇಧ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದರು ಹಾಗೂ ಸಿಪಿಐಎಂ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು. ತೀವ್ರ ಗೊಂದಲದ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ 10 ನಿಮಿಷಗಳ ಕಾಲ ಸದನವನ್ನು ಮುಂದೂಡಲಾಯಿತು. ಬುಧವಾರ ಲಾಲು ಪ್ರಸಾದ ಯಾದವ್ ಅವರು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ನಿಷೇಧಿಸಬೇಕು ಎಂದು ಸಂಸತ್ತಿನಲ್ಲಿ ಒತ್ತಾಯಿಸಿದ್ದರು. ಎಂಎನ್ಎಸ್ ನಿಷೇಧಕ್ಕೆ ಶರದ್ ಪವಾರ್ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಸದ್ಯಕ್ಕೆ
ಭಜರಂಗದಳದ
ನಿಷೇಧವಿಲ್ಲ:
ಕೇಂದ್ರ
ಭಜರಂಗದ
ಮೇಲೆ
ನಿಷೇಧ
ಹೇರುವ
ಸಾಧ್ಯತೆ?