ಕೋಮು ಗಲಭೆಗೆ ಕ್ರೈಸ್ತ ಸಂಘಟನೆಗಳೆ ಕಾರಣ: ಬಿಎಸ್ ವೈ
ನವದೆಹಲಿ, ಅ.13:''ಕೆಲವು ಕ್ರೈಸ್ತ ಸಂಘಟನೆಗಳು ಕರ್ನಾಟಕದಲ್ಲಿ ಕೋಮು ಭಾವನೆಗಳಿಗೆ ಭಂಗ ತರುತ್ತಿದ್ದು ಸಾಮಾಜಿಕವಾಗಿ ಆತಂಕ ಸೃಷ್ಟಿಸುತ್ತಿವೆ'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ(ಎನ್ ಐಸಿ) ಸಭೆಯಲ್ಲಿ ಹೇಳಿದರು.
ರಾಜ್ಯದಲ್ಲಿ ಹಿಂದು ಮತ್ತು ಕ್ರೈಸ್ತರು ಶಾಂತಿಯುತವಾಗಿ ಸಹ ಬಾಳ್ವೆ ನಡೆಸುತ್ತಿದ್ದಾರೆ. ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿ 'ನ್ಯೂ ಲೈಫ್'ನಂತಹ ಕೆಲವೊಂದು ಕ್ರೈಸ್ತ ಸಂಘಟನೆಗಳು ಹಿಂದೂ ಧರ್ಮಿಯರನ್ನು ಕ್ರೈಸ್ತಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿವೆ ಎಂದು ಎನ್ ಐಸಿ ಸಭೆಯನ್ನು ಉದ್ದೇಶಿಸಿ ಹೇಳಿದರು.
ಇಂತಹ ಕ್ರೈಸ್ತ ಸಂಘಟನೆಗಳು ಹಿಂದು ದೇವ ದೇವತೆಗಳನ್ನು ಅವಹೇಳನ ಮಾಡಿ 'ಸತ್ಯ ದರ್ಶನ'ದಂತಹ ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕೃತ್ಯಗಳು ನಿಲ್ಲಬೇಕು. ನಮ್ಮ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ ಮತಾಂತರವನ್ನು ಬೆಂಬಲಿಸುವುದಿಲ್ಲ ಎಂದರು.
ಕೆಲವು ಕೇಂದ್ರ ಸಚಿವರು ಹಾಗೂ ರಾಜಕೀಯ ಬದ್ಧ ವೈರಿಗಳು ತಮ್ಮನ್ನು ಟೀಕಿಸುತ್ತಿರುವ ಬಗ್ಗೆ ಯಡಿಯೂರಪ್ಪ ತರಾಟೆಗ ತೆಗೆದುಕೊಂಡರು. ''ಕೇಂದ್ರ ಸರಕಾರಿ ನೌಕರರು ಹಾಗೂ ಸಚಿವರು ನಮ್ಮ ರಾಜ್ಯವನ್ನು ಗುರಿಯಾಗಿಸಿಕೊಂಡು ರಾಜಕೀಯ ವೈರತ್ವವನ್ನು ಪ್ರದರ್ಶಿಸುತ್ತಿದ್ದಾರೆ'' ಎಂದರು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದ ನಂತರ ತನಿಖೆಗೆ ಕೇಂದ್ರದ ತಂಡ ಕಳುಹಿಸುವುದು ಸರಿಯಾದ ಕ್ರಮವಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ತ್ರಿಪುರ, ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿ ತೀವ್ರವಾಗಿ ಕೋಮುಗಲಭೆಗಳು ನಡೆಯುತ್ತಿವೆ. ಕೇಂದ್ರ ಸರಕಾರ ಈ ರಾಜ್ಯಗಳಿಗೆ ಬುದ್ಧಿ ಹೇಳಲು ಹೋಗದೆ ಮೌನವಾಗಿರುವುದು ಏಕೆ ಎಂದು ಕೇಂದ್ರ ಸರ್ಕಾರವನ್ನು ಯಡಿಯೂರಪ್ಪ ಚುಚ್ಚಿ ನುಡಿದರು.
(ಏಜೆನ್ಸೀಸ್)
ಕೇಂದ್ರದಿಂದ
ಎಚ್ಚರಿಕೆ
ಪತ್ರ
ಬಂದಿಲ್ಲ
:ವಿಎಸ್
.ಆಚಾರ್ಯ
ಭಜರಂಗದಳಕ್ಕೆ
ಪರ್ಯಾಯ
ಸಂಘಟನೆ
ರಚನೆ