ಯಡಿಯೂರಪ್ಪ ವಿರುದ್ಧ ಮಾತೆ ಮಹಾದೇವಿ ಕಿಡಿ
ಬಸವಕಲ್ಯಾಣ, ಅ.13: ಕರ್ನಾಟಕದ ಹಲವಾರು ಮಠ ಮಾನ್ಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದೆ ಮುಂದೆ ಆಲೋಚಿಸದೆ ಅಪಾರ ಪ್ರಮಾಣದ ಹಣವನ್ನು ದಾನವಾಗಿ ನೀಡುತ್ತಿದ್ದಾರೆ ಎಂದು ಮಾತೆ ಮಹಾದೇವಿ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಧಾರ್ಮಿಕ ಸಂಘಸಂಸ್ಥೆಗಳಿಗೆ ಸಾರ್ವಜನಿಕ ಹಣವನ್ನು ನೀಡುವುದು ಸರಿಯಲ್ಲ ಎಂದರು. ಹೀಗೆ ಮಠಮಾನ್ಯಗಳಿಗೆ ನೀಡಿದ ಹಣ ಸಾರ್ವಜನಿಕ ಸೇವೆಗೆ ಬಳಕೆಯಾದರೆ ಸಾರ್ಥಕವಾಗುತ್ತದೆ. ಆದರೆ ಮಠಗಳ ಅನುಗ್ರಹ ಪಡೆಯಲು ಯಡಿಯೂರಪ್ಪ ದಾನಧರ್ಮಗಳನ್ನು ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಬಸವಕಲ್ಯಾಣದಲ್ಲಿ ''ಕಲ್ಯಾಣ ಪರ್ವ'' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಬಸವಕಲ್ಯಾಣವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಹಾಗೂ ಬೀದರ್ ನ ಬಸವಕಲ್ಯಾಣ ಕ್ಷೇತ್ರಗಳು ಲಿಂಗಾಯತ ಸಮುದಾಯದ ಪವಿತ್ರ ಸ್ಥಳಗಳು. ಈ ನಿಟ್ಟಿನಲ್ಲಿ ಬಸವಕಲ್ಯಾಣವನ್ನು ಪ್ರವಾಸಿ ಕೇಂದ್ರವಾಗಿ ಮಾಡಲು 108 ಅಡಿ ಎತ್ತರದ ಬಸವೇಶ್ವರ ಮೂರ್ತಿಯನ್ನು ನಿರ್ಮಿಸಲಾಗುತ್ತಿದ್ದು ಮುಂದಿನ ವರ್ಷ ಅದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಬಸವೇಶ್ವರ ಮೂರ್ತಿ ನಿರ್ಮಾಣಕ್ಕಾಗಿ ಈಗಾಗಲೇ 2 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಅದು ಪೂರ್ಣವಾಗಲು ಇನ್ನ್ನೂ 1 ಕೋಟಿ ರು.ಗಳ ಅವಶ್ಯಕತೆ ಇದೆ. ಭಕ್ತರು ಕೊಡುವ ವಂತಿಗೆ ಮೂಲಕ ಉಳಿದ ಹಣವನ್ನು ಹೊಂಚಲಾಗುತ್ತದೆ ಎಂದರು. ಬಸವಕಲ್ಯಾಣದಲ್ಲಿ ಹಲವಾರು ಐತಿಹಾಸಿಕ ಸ್ಥಳಗಳು ಒತ್ತುವರಿಯಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ಎಂ.ಕೆಂಚಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)