ಮುಖ್ಯಮಂತ್ರಿಗಳ ಮನೆಗೆ ಅಪರೂಪದ ಅತಿಥಿ!
ಬೆಂಗಳೂರು, ಸೆ.13 : ಉತ್ತರ ಕರ್ನಾಟಕದ ಕಡೆ ವಿಪರೀತ ಸಂಕಷ್ಟಗಳು ಎದುರಾದರೆ 'ಕಾಲ ಕೆಳಗ ಹಾವು ಬಂದ್ಹಾಂಗ ಆಗೇದ' ಅನ್ನುತ್ತಾರೆ. ಆದರೆ, ಹಾವು ಕಾಲ್ಕೆಳಗೆ ಅಥವಾ ಮನೆಯೊಳಗೇ ಬಂದಾಗ ಸಂಕಷ್ಟ ಎದುರಾಗುತ್ತೋ ಇಲ್ಲವೋ ಎಂಬುದು ಅವರವರ ಭಾವ ಭಕುತಿಗೆ ನಿಲುಕುವ ವಿಷಯ. ವಿಷಯ ಏನಂದ್ರೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯೊಳಗೂ ಹಾವೊಂದು ಹೊಕ್ಕು ಯಾರ ಕೈಗೂ ಸಿಗದೇ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ.
ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ಮನೆ ಒಳಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಹಾವು ಹೊಕ್ಕಿದೆ. ಅಧಿಕಾರಿಗಳು ಹಾವಿಗಾಗಿ ತೀವ್ರ ಶೋಧನೆ ನಡೆಸಿದ್ದಾರೆ. ಮುಖ್ಯಮಂತ್ರಿ ಮನೆಯ ಮುಂದಿನ ಹಳೆಯ ಮನೆಯ ಗೋಡೆಯನ್ನು ಕೆಡವುತ್ತಿರಬೇಕಾದರೆ ಹಾವು ಪತ್ತೆಯಾಗಿದೆ. ಅದು ಮುಖ್ಯಮಂತ್ರಿಗಳ ಮನೆಗೆ ಹೊಕ್ಕಿದ್ದಾಗಿ ಅಲ್ಲಿನ ಕೂಲಿ ಕಾರ್ಮಿಕರು ಅದನ್ನು ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ತಂದರು. ಹಾವಿನ ಪತ್ತೆ ಕಾರ್ಯ ಮುಂದುವರೆದಿದೆ.
ಮುಖ್ಯಮಂತ್ರಿ ಮನೆಯ ಬಳಿ ಗಿಡ ಮರ ಪೊದೆಗಳು ಹೇರಳವಾಗಿದ್ದು ಇಲ್ಲಿ ಹಾವುಗಳ ಕಾಟ ಬಹಳ ದಿನಗಳಿಂದಲೂ ಇದೆ. ರಕ್ಷಣೆಗೂ ಸಹ ತೊಂದರೆಯಾಗುತ್ತಿದ್ದು ಈ ಹಳೆಯ ಗೋಡೆಯನ್ನು ಕೆಡವಲು ಸೂಚಿಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳ ಮನೆಯಲ್ಲಿ ನಾಗರಹಾವು ಪತ್ತೆಯಾಗಿತ್ತು. ಈಗ ಹೊಕ್ಕಿರುವ ಹಾವು ಯಾವ 'ಜಾತಿ'ಗೆ ಸೇರಿದ್ದು ಎಂದು ಇನ್ನೂ ತಿಳಿದುಬಂದಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇದೂ ಸಹ ನಾಗರ ಹಾವಾಗಿರುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications