ಇತ್ಯರ್ಥಗೊಂಡ ಸಿಂಗೂರ್ ಭೂವಿವಾದ
ಕೊಲ್ಕತ್ತಾ, ಸೆ. 8 : ತೀವ್ರ ಸಮಸ್ಯೆ ಸೃಷ್ಟಿಸಿದ್ದ ಸಿಂಗೂರ್ ಭೂ ವಿವಾದ ಕೊನೆಗೂ ಇತ್ಯರ್ಥವಾಗಿದೆ. ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಸಮ್ಮುಖದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಭಾನುವಾರ ನಡೆಸಿದ ಮಾತುಕತೆ ಫಲಪ್ರದವಾಗಿದೆ.
ಟಾಟಾ ಮೋಟಾರ್ಸ್ ನ್ಯಾನೋ ಕಾರು ಘಟಕದ ವಶದಲ್ಲಿರುವ 100 ಎಕರೆ ಪ್ರದೇಶ ಸೇರಿ ಒಟ್ಟು 230 ಎಕರೆ ಪ್ರದೇಶವನ್ನು ರೈತರಿಗೆ ನೀಡಲು ಮುಖ್ಯಮಂತ್ರಿ ಭಟ್ಟಾಚಾರ್ಯ ಸಮ್ಮತಿಸಿದ್ದಾರೆ. ಹಾಗೂ ಈ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಜಂಟಿ ಸಮಿತಿ ರಚನೆಯಾಗಲಿದೆ ಎಂದು ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆಶ್ವಾಸನೆಯಿಂದ ತೃಪ್ತಗೊಂಡಿರುವ ಮಮತಾ ಬ್ಯಾನರ್ಜಿ ಪ್ರತಿಭಟನೆ ಹಿಂಗೆತೆದುಕೊಳ್ಳಲು ನಿರ್ಧರಿಸಿದ್ದಾರೆ. ಭಟ್ಟಾಚಾರ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರೊಡನೆ ಮಮತಾ ಬ್ಯಾನರ್ಜಿ ಭೇಟಿ ಹಾಗೂ ಮಾತುಕತೆ ಇದೇ ಮೊದಲ ಸಲವಾಗಿದೆ. ಕಳೆದ ಅನೇಕ ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಮಧ್ಯೆ ಪ್ರವೇಶದಿಂದ ತೆರೆಬಿದ್ದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಸಿಂಗೂರಿನ ಕಾರು ಘಟಕ ಮುಚ್ಚುವ ಚಿಂತನೆ:ಟಾಟಾ












Click it and Unblock the Notifications