ಖೇಲ್ ರತ್ನ ಸ್ವೀಕರಿಸಿಲು ಧೋನಿಗೆ ಉದಾಸೀನತೆ
ನವದೆಹಲಿ, ಆ. 29 : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿರುವ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ನ ಏಕದಿನ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯ ನೆಪವೊಡ್ಡಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರುಹಾಜರಾಗುವ ಅವರ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಟೀಕೆಗಳು ಸುರಿಮಳೆ ದಂಡಿದಂಡಿಯಾಗಿ ಕೇಳಬರತೊಡಗಿವೆ.
ಭಾರತೀಯ ಕ್ರಿಕೆಟ್ ನ ಅದ್ಭುತ ಕಲಿ ಮಹೇಂದ್ರ ಸಿಂಗ್ ಧೋನಿಗೆ 2007-08 ಸಾಲಿನ ಕ್ರೀಡಾ ಕ್ಷೇತ್ರದ ಪರಮೋಚ್ಚ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎನ್ನುವ ಹೆಗ್ಗಳಿಕೆ ಹೊಂದಿರುವ ಖೇಲ್ ರತ್ನ ಪ್ರಶಸ್ತಿ ಪಡೆಯಲು ಪಂದ್ಯದ ಕಾರಣ ನೀಡಿ ಗೈರು ಹಾಜರಾಗಲಿದ್ದಾರೆ.
ಈಗಾಗಲೇ ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಡಿಯಾ ಕಪ್ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿದೆ. ಆ. 29ಕ್ಕೆ ಐದನೇ ಏಕದಿನ ಪಂದ್ಯ ನಡೆಯಲಿದ್ದು. ಅದು ಭಾರತಕ್ಕೆ ಔಪಚಾರಿಕ ಪಂದ್ಯವಾಗಿದೆ. ಧೋನಿ ಅವರು ಆ ಪಂದ್ಯಕ್ಕೆ ಗೈರುಹಾಜರಾದರೆ ಅಂತಹ ನಷ್ಟವೇನೂ ಇಲ್ಲ. ಸರಣಿ ಗೆದ್ದ ಮೇಲೆ ಇತರೇ ಆಟಗಾರರಿಗೆ ಅವಕಾಶ ನೀಡುವುದು ನಡೆದುಕೊಂಡು ಸಂಪ್ರದಾಯ.
ಇಷ್ಟಾದರೂ ಧೋನಿ ಅವರು ಪಂದ್ಯದ ನೆಪವೊಡ್ಡಿ ಸಮಾರಂಭಕ್ಕೆ ಗೈರಾಗುವುದು ಕೆಲವರಿಗೆ ಅಶ್ಚರ್ಯ ತರಿಸಿದರೆ, ಇನ್ನೂ ಕೆಲವರಿಗೆ ಕೋಪ ತರಿಸಿದೆ. ಕ್ರೀಡಾ ಕ್ಷೇತ್ರದ ಉನ್ನತ ಪ್ರಶಸ್ತಿ ಸ್ವೀಕರಿಸಲು ಧೋನಿ ಉದಾಸೀನತೆ ತೋರಿಸುವುದು ತರವಲ್ಲ ಎಂದು ಕಿಡಿಕಾರಿದ್ದಾರೆ. ಅನೇಕ ಕ್ರೀಡಾಪಟುಗಳು ಈ ದಿನಕ್ಕಾಗಿ ಸತತ ಪ್ರಯತ್ನ ನಡೆಸಿದರೂ ಆ ಭಾಗ್ಯ ದೊರೆಕಿರುವುದಿಲ್ಲ. ಹೀಗಿದ್ದಾಗ ಧೋನಿ ಗೈರು ಎಷ್ಟು ಸರಿ ಎನ್ನುವುದು ಎಲ್ಲರ ಆಕ್ಷೇಪವಾಗಿದೆ. ವಾಣಿಜ್ಯ ಜಾಹೀರಾತುಗಳ ಚಿತ್ರೀಕರಣವಿದ್ದರೆ ಮಹತ್ವದ ಪಂದ್ಯಗಳನ್ನು ಬಿಟ್ಟು ಶೂಟಿಂಗ್ ನಲ್ಲಿ ಭಾಗವಹಿಸುವ ಕ್ರಿಕೆಟ್ ಆಟಗಾರರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅನುಪಸ್ಥಿತಿ ಕ್ರೀಡಾಪ್ರೇಮಿಗಳಿಗೆ ಬೇಸರ ತರಿಸಿದೆ.
ಆ. 29 ರಂದು ಭಾರತೀಯ ಕ್ರೀಡಾಕ್ಷೇತ್ರದ ಸರ್ವಕಾಲಿಕ ಶ್ರೇಷ್ಠ ಹಾಕಿ ಪಟು ಧ್ಯಾನ್ ಚಂದ್ ಅವರ ಜನ್ಮ ದಿನವಾಗಿದೆ. ಅವರ ಸವಿನೆನಪಿಗಾಗಿ ಇಂದು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಕ್ರೀಡಾಳುಗಳಿಗೆ ರಾಜೀವ್ ಖೇಲ್ ರತ್ನ, ಅರ್ಜುನ್, ದ್ರೋಣಚಾರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)