ಕಾರು- ಟ್ಯಾಂಕರ್ ನಡುವೆ ಢಿಕ್ಕಿ : ಇಬ್ಬರು ಸಾವು
ಮಂಗಳೂರು, ಆ. 22 : ನೆಲ್ಯಾಡಿ ಸಮೀಪ ಪೆರಿಯಾಶಾಂತಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ವಲ್ತಾಜೆ ಸೇತುವೆ ಬಳಿ ಇಂದು ಬೆಳಗ್ಗೆ 6:15 ರ ಸುಮಾರಿಗೆ ಮಾರುತಿ ಇಂಡಿಕಾ ಕಾರು(KA 05 AA 276) ಹಾಗೂ ಗ್ಯಾಸ್ ಟ್ಯಾಂಕರ್ ವಾಹನ (KA 01 C 8583) ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದೆ. ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಹಾಗೂ ಕಾರು ಬೆಂಗಳೂರಿನಿಂದ ವಿಟ್ಲಾಕ್ಕೆ ಹೋಗುತ್ತಿತ್ತು. ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಪದ್ಮಾವತಿ (65)ಮತ್ತು ನರಸಿಂಹ(35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ತೀವ್ರವಾಗಿ ಗಾಯಗೊಂಡು ಬದುಕುಳಿದಿದ್ದ ವಿಜಯಶಾಂತಿ ಹಾಗೂ ಮುರಳೀಧರ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳ ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಟ್ಯಾಂಕರ್ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ಜನರು ಭಯಬೀತರಾಗಿದ್ದಾರೆ. ಸ್ಥಳದಿಂದ ಎರಡು ಕಿ.ಮೀ ದೂರದ ವರೆಗೂ ಜನರನ್ನು ದೂರ ಕಳಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ತಪಾಸಣೆ ನಡೆಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟಿರುವ ಇಬ್ಬರೂ ವಿಟ್ಲ ಗ್ರಾಮದವರು ಎಂದು ಮೂಲಗಳಿಂದ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಫಲ್ಗುಣಿ ನದಿ ದುರಂತದ ಬಗ್ಗೆ ಪೊಲೀಸ್ ವರದಿ