ಮೈಸೂರಿನ ಸೆಕ್ಯುರಿಟಿ ಕಚೇರಿಯಲ್ಲಿ 70 ಲಕ್ಷ ದರೋಡೆ
ಮೈಸೂರು, ಆ. 04 : ನಗರದ ಗ್ರೂಫ್ 4 ಸೆಕ್ಯುರಿಟಿ ಕಚೇರಿಯೊಂದಕ್ಕೆ ನುಗ್ಗಿದ ಡಕಾಯಿತರ ಗುಂಪೊಂದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 70.50 ಲಕ್ಷ ರುಪಾಯಿ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.
ಮೇಟಗಳ್ಳಿ ಪೊಲೀಸ್ ಠಾಣೆ ಹಿಂಭಾಗದ ಗ್ರೂಫ್ 4 ಸೆಕ್ಯುರಿಟಿ(ಜಿ4ಎಸ್) ಕಚೇರಿಯಲ್ಲಿ ಮಧ್ಯರಾತ್ರಿ 12.45ರಲ್ಲಿ ಈ ಘಟನೆ ನಡೆದಿದೆ. ಶನಿವಾರ ಐಸಿಐಸಿಐ ಬ್ಯಾಂಕಿನಿಂದ ತರಲಾಗಿದ್ದ 50 ಲಕ್ಷ ರುಪಾಯಿ ಹಾಗೂ ಕಚೇರಿಯಲ್ಲಿಯೇ ಇದ್ದ 20 ಲಕ್ಷ ರುಪಾಯಿಗಳನ್ನು ಏಳು ಜನರ ತಂಡ ದೋಚಿ ಪರಾರಿಯಾಗಿದೆ ಎಂದು ಹಲ್ಲೆಗೊಳಗಾದ ಕಚೇರಿ ಕಂಟ್ರೋಲರ್ ವಿನೋದ್ ಪೊಲೀಸರಿಗೆ ದೂರು ನೀಡಿದ್ದಾರೆ.
70 ಲಕ್ಷ ಇಟ್ಟಿದ್ದ ಕಚೇರಿಯಲ್ಲಿ ಗನ್ ಮ್ಯಾನ್ ಸುರೇಶ್ ಮತ್ತು ಕಂಟ್ರೋಲರ್ ವಿನೋದ್ ಮಾತ್ರ ಇದ್ದರು. ಈ ಸೆಕ್ಯುರಿಟಿ ಏಜನ್ಸಿಗೆ ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಬರೋಡಾ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಜವಾಬ್ದಾರಿ ನೀಡಿತ್ತು. ರಾತ್ರಿ 11 ಗಂಟೆ ಸಮಯದಲ್ಲಿ ನಾಯಿ ಬೊಗಳಿದ ಶಬ್ದ ಕೇಳಿದೆ. ಕಚೇರಿಯಿಂದ ಹೊರ ಬಂದು ವಿನೋದ ನೋಡಿದ್ದಾರೆ. ಯಾರು ಇರಲಿಲ್ಲ. ಮತ್ತೆ 12.45ಕ್ಕೆ ಯಾರೋ ಬಾಗಿಲು ತಟ್ಟಿದ್ದಾರೆ.
ವಿನೋದ್ ಬಾಗಿಲು ತೆರೆಯತ್ತಿದ್ದಂತೆಯೇ ಡಕಾಯಿತರ ತಂಡ ಮಚ್ಚು ಲಾಂಗ್ ಹಿಡಿದು ಒಳ ನುಗ್ಗಿದ್ದಾರೆ. ಒಳಗಿದ್ದ ಗನ್ ಮ್ಯಾನ್ ಸುರೇಶ್ ನಿಗೆ ಕೈಕಾಲು ಕಟ್ಟಿ ಬಾಯಿದೆ ಬಟ್ಟೆ ತುರುಕಿ ಎಳೆದುಕೊಂಡು ಹೋಗಿ ಬಾತ್ ರೂಮ್ ನಲ್ಲಿ ಕೂಡಿ ಹಾಕಿದ್ದಾರೆ. ವಿನೋದ್ ಕೈ ಮತ್ತು ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಆತನನ್ನು ಎಳೆದುಕೊಂಡು ಹೋಗಿ ಮಹಡಿ ಕೆಳಗೆ ಕಟ್ಟಿಹಾಕಿದ್ದಾರೆ. ಸುಮಾರು 25 ರಿಂದ 35 ವರ್ಷದವರಾಗಿದ್ದ ಡಕಾಯಿತರ ತಂಡ ಹಿಂದಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಜನ್ಸಿಯ ಮಾಜಿ ಉದ್ಯೋಗಿ ಜಾನ್ಸನ್ ಎಂಬಾತನನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಈ ಕೃತ್ಯದಲ್ಲಿ ಕಚೇರಿ ಸಿಬ್ಬಂದಿಗಳ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)