ಕೇಳಿದ್ದು ನ್ಯಾಯ, ದಕ್ಕಿದ್ದು ಪೊಲೀಸ್ ಲಾಠಿ ರುಚಿ
ಮಂಗಳೂರು, ಆ.4 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡೆಮೊಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಹಾಗೂ ಸಿಪಿಐ(ಎಂ) ಸಂಘಟನೆಗಳು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದವು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಮನಬಂದಂತೆ ಲಾಠಿ ಪ್ರಹಾರಮಾಡಿದರು. ಲಾಠಿ ಪ್ರಹಾರದಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ.
ಕಳೆದ ಎರಡು ತಿಂಗಳನಿಂದ ನೀರಿನ ಬಿಲ್ ಹೆಚ್ಚಳ, ನೀರು ಸರಬರಾಜು ಖಾಸಗೀಕರಣ ಹಾಗೂ ಮಹಾನಗರ ಪಾಲಿಕೆ ಅವ್ಯವಹಾರ ಖಂಡಿಸಿ ಡಿವೈಎಫ್ಐ ಹಾಗೂ ಸಿಪಿಐ(ಎಂ) ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ತೆರಳಿದ ಪ್ರತಿಭಟನಾಕಾರರು ತಮ್ಮ ಮನವಿಯನ್ನು ಖುದ್ದು ಮೇಯರ್ ಗಣೇಶ್ ಅವರೇ ಬಂದು ಸ್ವೀಕರಿಸಬೇಕು ಎಂದು ಪಟ್ಟುಹಿಡಿದರು.ಬೆಳಗ್ಗೆ 10 ಗಂಟೆಗೆ ಮಹಾನಗರ ಪಾಲಿಕೆ ಮುಂದೆ ಬಂದು ನಿಂತ ಪ್ರತಿಭಟನಾಕಾರರು 12 ಗಂಟೆಯವರೆಗೂ ಮೇಯರ್ ತಮ್ಮ ಮನವಿಯನ್ನು ಸ್ವೀಕರಿಸದಿದ್ದಕ್ಕೆ ಆಕ್ರೋಶಗೊಂಡ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಮನಬಂದಂತೆ ಥಳಿಸಿದರು.
ಇದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಆಕ್ರೋಶಗೊಂಡ ಪ್ರತಿಭಟನಾಕಾರು ಮೂರು ಬಸ್ ಗಳನ್ನು ಜಖಂಗೊಳಿಸಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ.
ಮಹಾನಗರ ಪಾಲಿಕೆ ಮೇಯರ್ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ಮೇಯರ್ ಗಣೇಶ್ ಅವರು ಜನವಿರೋಧಿ ಕೆಲಸ ಮಾಡಿದ್ದಾರೆ. ಮನವಿ ಪತ್ರವನ್ನು ಸ್ವೀಕರಿಸದೆ ದುರಹಂಕಾರದಿಂದ ವರ್ತಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಪಾಲಿಕೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಪ್ರತಿಭಟನಾಕಾರರಿಗೆ ಈ ಶಿಕ್ಷೆ ನೀಡಿದ್ದಾರೆ. ಸುಮಾರು 250 ಜನ ಪ್ರತಿಭಟನಾಕಾರರು ಲಾಠಿ ಏಟು ತಿಂದಿದ್ದಾರೆ ಎಂದು ಡಿವೈಎಫ್ಐ ಮುಖಂಡ ಸುನೀಲ್ ಕುಮಾರ್ ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications