ಕೊಲ್ಕತ್ತಾದಲ್ಲಿ ಆಕಸ್ಮಿಕ ಸ್ಫೋಟ ನಾಲ್ಕು ಸಾವು
ಕೊಲ್ಕತ್ತಾ, ಆ. 04 : ನಗರದ ಸರ್ಭಾಮಂಗಲ ಘಾಟ್ ಬಳಿ ಭಾನುವಾರ ಸಂಜೆ ನಡೆದ ಸ್ಫೋಟದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗುಜರಿ ಅಂಗಡಿಯೊಂದರಲ್ಲಿ ನಡೆದ ಈ ಸ್ಫೋಟದ ಘಟನೆ ಗೊತ್ತಾಗುತ್ತಿದ್ದಂತೆಯೇ ನಗರದಾದ್ಯಂತ ಜನ ಗಾಬರಿಗೊಂಡಿದ್ದು, ಪೊಲೀಸರು ಎಲ್ಲಡೆ ಕಟ್ಟೆಚ್ಚರ ವಹಿಸಿದ್ದಾರೆ.
ರಾತ್ರಿ ಈ ಕುರಿತು ವಿವರ ನೀಡಿದ ಕೊಲ್ಕತ್ತಾ ನಗರ ಪೊಲೀಸ್ ಆಯುಕ್ತ ಗೌತಮ್ ಮೋಹನ್ ಚಕ್ರವರ್ತಿ ಸ್ಫೋಟದಲ್ಲಿ ಯಾವುದೇ ಉಗ್ರರ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೊಂದು ಆಕಸ್ಮಿಕ ಯಾರೋ ಎಸೆದಿದ್ದ ಶೆಲ್ ಗಳನ್ನು ಕಸ ಹೆಕ್ಕುವ ಬೀದಿ ಮಕ್ಕಳು ಸಂಗ್ರಹಿಸಿದ್ದರು. ಸಂಜೆ ಸಮಯದಲ್ಲಿ ಸುತ್ತಿಗೆಯಿಂದ ಒಡೆದು ಅದರಲ್ಲಿದ್ದ ಲೋಹವನ್ನು ತೆಗೆಯಲು ಪ್ರಯತ್ನಿಸಿದರು ಆಗ ಸ್ಫೋಟ ಸಂಭವಿಸಿತು ಎಂದು ಅವರು ವಿವರಿಸಿದರು.
ಬೆಂಗಳೂರು, ಅಹಮದಾಬಾದ್ ಸ್ಫೋಟದ ನಂತರ ಕೊಲ್ಕತ್ತಾ ಮತ್ತು ಚೆನ್ನೈ ನಗರಗಳು ಉಗ್ರರ ಹಿಟ್ ಲಿಸ್ಟ್ ನಲ್ಲಿರುವ ನಗರಗಳಾಗಿವೆ. 'ಬ್ಯಾಕ್ 'ಎಂಬ ಹೆಸರಿನಡಿಯಲ್ಲಿ ಸ್ಫೋಟಗೊಳಿಸಲು ಉಗ್ರರು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸ್ಫೋಟ ಉಗ್ರರು ಮಾಡಿದ್ದು ಎಂದು ಊಹಿಸಲಾಗಿತ್ತು. ಆದರೆ ಪೊಲೀಸರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಗುಜರಿ ಅಂಗಡಿಯೊಂದರಲ್ಲಿ ಶೆಲ್ ಗಳಲ್ಲಿ ರುವ ಲೋಹಗಳನ್ನು ತಗೆಯುವ ಸಮಯದಲ್ಲಿ ಸ್ಫೋಟವಾಗಿದೆ ಎಂದು ಹೇಳಿದ್ದರಿಂದ ಜನತೆ ನಿಟ್ಟುಸಿರುಬಿಡುವಂತಾಯಿತು.
(ದಟ್ಸ್ ಕನ್ನಡ ವಾರ್ತೆ)
ಸೂರತ್ ನಲ್ಲಿ ಇನ್ನೊಂದು ಸಜೀವ ಬಾಂಬ್ ಪತ್ತೆ