ರಾಮಸೇತು ಧ್ವಂಸ ಮಾಡಿದ್ದು ಸಾಕ್ಷಾತ್ ಶ್ರೀರಾಮ
ನವದೆಹಲಿ, ಜು. 24 : ಸೇತು ಸಮುದ್ರಂ ಯೋಜನಾ ಪ್ರದೇಶದಲ್ಲಿ ರಾಮಸೇತುವೆ ಎಂಬುದೇ ಇಲ್ಲವೇ ಇಲ್ಲ. ಅದನ್ನು ರಾಮಾಯಣ ಕಾಲದಲ್ಲಿ ಶ್ರೀರಾಮನೇ ಅದನ್ನು ಒಡೆದು ಹಾಕಿದ್ದಾನೆ ಎಂದು ಸುಪ್ರಿಂಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ವೇಳೆ ಸಮಸ್ಯೆಗೆ ವೈಜ್ಞಾನಿಕ ಹಾಗೂ ರಾಜಕೀಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಒಲವು ವ್ಯಕ್ತಪಡಿಸಿದೆ.
ಬುಧವಾರ ಸುಪ್ರಿಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ ರಾಮಾಯಣ ಕಾಲದಲ್ಲಿ ಅಸ್ತಿತ್ವದಲ್ಲಿ ಇತ್ತು ಎನ್ನಲಾದ ರಾಮಸೇತುವೆಯನ್ನು ಸ್ವತಃ ಶ್ರೀರಾಮನೇ ಮಾಯಾ ಬಿಲ್ಲಿನಿಂದ ಧ್ವಂಸಗೊಳಿಸಿದ್ದಾನೆ ಎಂದು ಹೇಳಿದೆ. ಇದಕ್ಕಾಗಿ ತಮಿಳಿನ ಕಂಬ ರಾಮಾಯಣದಲ್ಲಿ ಬರುವ ಮಾಹಿತಿಯನ್ನು ದಾಖಲೆಗಾಗಿ ಉಲ್ಲೇಖಿಸಿದೆ.
ಕೋರ್ಟ್ ನಲ್ಲಿ ಸರ್ಕಾರದ ಪರ ವಾದ ಮಂಡಿಸಿರುವ ಹಿರಿಯ ವಕೀಲ ಫಾಲಿ ನಾರಿಮನ್ ಕಂಬ ರಾಮಾಯಣ ಹಾಗೂ ಪದ್ನ ಪುರಾಣ ದಲ್ಲಿ ಇರುವ ಮಾಹಿತಿ ಪ್ರಕಾರ ರಾಮನೇ ತನ್ನ ಬಿಲ್ಲಿನಿಂದ ಸೇತುವನ್ನು ಮೂರು ತುಂಡುಗಳಾಗಿ ಧ್ವಂಸ ಮಾಡಿದ್ದಾನೆ ಎಂಬುದು ತಿಳಿದುಬರುತ್ತದೆ. ಲಂಕೆಯಿಂದ ಯಾರೂ ಭರತಖಂಡವನ್ನು ಪ್ರವೇಶಿಸಿಬಾರದು ಎಂಬುದು ಈ ಸೇತುವೆ ಧ್ವಂಸದ ಉದ್ದೇಶವಾಗಿತ್ತು ಎಂದಿದ್ದಾರೆ.
ರಾಮಸೇತು ಇದೆ ಎಂದು ವಾದಿಸುವವರು ಶತಮಾನಗಳಿಂದ ಅದನ್ನು ಸ್ಮಾರಕವೆಂದು ಘೋಷಿಸಲು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ನಾರಿಮನ್, ಯೋಜನೆ ಆರಂಭವಾದ ಕೂಡಲೇ ಈ ಪ್ರಶ್ನೆ ಎತ್ತಿರುವುದು ಯೋಜನೆಗೆ ಅಡ್ಡಗಾಲು ಹಾಕುವ ಉದ್ದೇಶವನ್ನು ತೋರಿಸುತ್ತದೆ ಎಂದು ವಾದ ಮಂಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠ ಈ ಸಮಸ್ಯೆಗೆ ವೈಜ್ಞಾನಿಕ, ತಾಂತ್ರಿಕ ಹಾಗೂ ರಾಜಕೀಯ ಸಮ್ಮತವಾದ ಪರಿವಾರಕಂಡುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಸುಪ್ರಿಂಕೋರ್ಟ್ ಸೂಚಿಸಿತು.
(ದಟ್ಸ್ ಕನ್ನಡ ವಾರ್ತೆ)