ವಿಶ್ವಾಸಮತದಲ್ಲಿ ಯುಪಿಎಗೆ ಸೋಲಾದರೆ ಮುಂದೆ?
ನವದೆಹಲಿ, ಜು. 22 : ಅಣು ಒಪ್ಪಂದ ಬಿಕ್ಕಟ್ಟಿನಿಂದ ಕೇಂದ್ರದ ಯುಪಿಎ ಸರ್ಕಾರ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು, ತೀವ್ರ ಕುತೂಹಲ ಕೆರಳಿಸಿರುವ ವಿಶ್ವಾಸಮತ ಪ್ರದರ್ಶನದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸೋಲನುಭವಿಸಿದಲ್ಲಿ ಮುಂದಿನ ಬೆಳವಣಿಗೆಯ ಬಗ್ಗೆ ಒಂದು ನೋಟ.
ಸರ್ಕಾರಕ್ಕೆ ಅಂಕಗಣಿತ ಮುಖ್ಯವಾಗಿರುವ ಈ ಸಂದರ್ಭದಲ್ಲಿ ಒಂದು ವೇಳೆ ವಿಶ್ವಾಸಮತದಲ್ಲಿ ಪರ ಮತ್ತು ವಿರೋಧ ಮತಗಳು ಸಮವಾದರೇ, ಲೋಕಸಭಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ ಚಲಾಯಿಸಬೇಕು. ಆಗ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಹಂಗಾಮಿ ಸ್ಪೀಕರ್ ಒಬ್ಬರನ್ನು ನೇಮಿಸಬೇಕಾಗಬಹುದು. ಆದರೆ ಇಂದಿನ ಸಮಯದಲ್ಲಿ ಲೋಕಸಭಾಧ್ಯಕ್ಷರಾಗಿರುವ ಸೋಮನಾಥ್ ಚಟರ್ಜಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಕಾರಣ ಯುಪಿಎ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಂಡಿರುವ ಎಡಪಕ್ಷಗಳ ಕ್ರಮವನ್ನು ವಿರೋಧಿಸಿರುವ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸುತಾರಾಂ ಒಪ್ಪಿಲ್ಲ. ಆದರೆ ಎಡಪಕ್ಷಗಳು ಯುಪಿಎ ಸರ್ಕಾರದ ಬೆಂಬಲ ಹಿಂಗೆದುಕೊಂಡಿರುವ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಸೋಮನಾಥ್ ಚಟರ್ಜಿ ಅವರ ಹೆಸರು ಕೂಡಾ ಇದೆ. ಇದನ್ನು ಚಟರ್ಜಿ ಅವರೇ ಬಲವಾಗಿ ವಿರೋಧಿಸಿದ್ದಾರೆ. ಚಟರ್ಜಿ ರಾಜೀನಾಮೆ ನೀಡಿದಲ್ಲಿ ಅವರು ಯುಪಿಎ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.
ವಿಶ್ವಾಸಮತದಲ್ಲಿ ಸೋಲಾದರೆ, ಕಾನೂನು ಪ್ರಕಾರ ಪ್ರಧಾನಮಂತ್ರಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬೇಕು. ಆಗ ರಾಷ್ಟ್ರಪತಿಗಳು ಮನಸ್ಸು ಮಾಡಿದಲ್ಲಿ ಇನ್ನೊಂದು ಸರ್ಕಾರಕ್ಕೆ ಆಹ್ವಾನಿಸಬಹುದು ಇಲ್ಲವೇ, ಚುನಾವಣೆ ಘೋಷಣೆಗೆ ಮುಂದಾಗಬಹುದು. ಯುಪಿಎಯೇತರ ಪಕ್ಷಗಳು ಸರ್ಕಾರ ರಚನಗೆ ಮುಂದಾದಲ್ಲಿ ಏನೇನು ಸಾಧ್ಯತೆಗಳಿವೆ ಎನ್ನುವುದು ಕೆಳಗೆ ವಿವರಿಸಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್ ಪಿ ನಾಯಕಿ ಮಾಯಾವತಿ ಹಾಗೂ ತೆಲುಗು ದೇಶಂ ಪಾರ್ಟಿ ನಾಯಕ ಚಂದ್ರಬಾಬು ನಾಯ್ಡು ನೇತೃತ್ವದ ತೃತೀಯ ರಂಗ (ಯುಎನ್ ಪಿಎ) ಸರ್ಕಾರ ರಚನೆಗೆ ಮುಂದಾಗಬಹುದು. ತೃತೀಯ ರಂಗಕ್ಕೆ ಎಡಪಕ್ಷಗಳು ಒಲವು ತೋರಿಸಿವೆ. ಜತೆಗೆ ಬಿಜೆಪಿ ಬಾಹ್ಯ ಬೆಂಬಲ ಘೋಷಿಸುವ ಸಾಧ್ಯತೆಗಳಿವೆ. ಹಾಗೇನಾದರೂ ಆದಲ್ಲಿ ದೇಶದಲ್ಲಿ ಮೂಟ್ಟಮೂದಲ ಬಾರಿಗೆ ದಲಿತ ಮಹಿಳೆಯೊಬ್ಬರು ಅತ್ಯುನ್ನತ ಹುದ್ದೆ ಎನ್ನಲಾದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಬಹುದು. ಮಾಯಾವತಿ ಪ್ರಧಾನಿಯಾಗದಿದ್ದರೂ ನೂತನ ಸರ್ಕಾರದಲ್ಲಿ ಪ್ರಭಾವಿ ಹುದ್ದೆ ಅಲಂಕರಿಸುವಲ್ಲಿ ಬಿಎಸ್ಪಿ ಹಿಂದೆ ಬೀಳುವುದಿಲ್ಲ.
ತೃತೀಯ ರಂಗದಲ್ಲಿ ಬಿಜೆಪಿ ಹೆಚ್ಚು ಸಂಸದರನ್ನು ಹೊಂದಿರುವ ದೊಡ್ಡ ಪಕ್ಷ, ಯುಪಿಎ ಸರ್ಕಾರವನ್ನು ಅಣು ಒಪ್ಪಂದದ ವಿಷಯದಲ್ಲಿ ಒಂದಾಗಿ ವಿರೋಧಿಸಿರುವ ಎಡಪಕ್ಷಗಳು ಮತ್ತು ಬಿಜೆಪಿ ಒಂದಾಗಿವೆ. ಎಡಪಕ್ಷಗಳು ಸಹಮತ ಸೂಚಿಸಿದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ಬರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ?
ತೃತೀಯ ರಂಗಕ್ಕೂ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿದ್ದಲ್ಲಿ ಮುಂದಿನ ಬರುವವರೆಗೂ ಸಧ್ಯದ ಸರ್ಕಾರವನ್ನು ಉಳಿಸಿಕೊಳ್ಳಲು ರಾಷ್ಟ್ರಪತಿಗಳು ಮುಂದಾಗಬಹುದು. ಸಿಕ್ಕ ಅವಕಾಶವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಣು ಒಪ್ಪಂದದ ಮುಂದಿನ ಹಂತವನ್ನು ಮುಂದುವರೆಸುವ ಸಾಧ್ಯತೆಗಳಿವೆ. ಆದರೆ ಅಲ್ಪ ಮತಕ್ಕೆ ಕುಸಿದಿರುವ ಸರ್ಕಾರ ಪ್ರಮುಖ ಒಪ್ಪಂದ ಇಲ್ಲವೇ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಎಡಪಕ್ಷಗಳು ಕೆವಿಯಟ್ ಅರ್ಜಿಯನ್ನು ಈಗಾಗಲೇ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)