ಹೊಗೇನಕಲ್ ಯೋಜನೆ ಅನೂರ್ಜಿತ: ಈಶ್ವರಪ್ಪ
ಬೆಂಗಳೂರು, ಜು.22: ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರಕ್ಕೆ ಕುಡಿಯುವ ನೀರಿನ ಹಾಗೂ ಜಲವಿದ್ಯುತ್ ಯೋಜನೆಗೆ ಹಿಂದಿನ ಎನ್ಡಿಎ ಸರ್ಕಾರ ಅನುಮತಿ ನೀಡಿತ್ತು. ಈಗ ಕಾಮಗಾರಿ ಆರಂಭವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು ಎಂದು ಕಾಂಗ್ರೆಸ್ನ ಗುರುಪಾದಪ್ಪ ನಾಗಮಾರಪಳ್ಳಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹೊಗೇನಕಲ್ ವಿವಾದದ ಬಗ್ಗೆ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಕೇಂದ್ರ ಸರ್ಕಾರ ಪ್ರತಿಯೊಂದು ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ವಿದ್ಯುತ್ ಸಮಸ್ಯೆಯನ್ನು ಕಡೆಗಣಿಸಿದೆ. ರಾಜ್ಯದ ಪಾಲಿಗೆ ಬರಬೇಕಿದ್ದ ವಿದ್ಯುತ್ನ್ನು ಕಡಿತಗೊಳಿಸಿದೆ. ಹೊಗೇನಕಲ್ ವಿಚಾರದಲ್ಲಿ ಮೌನ ವಹಿಸಿದೆ. ಮುಖ್ಯಮಂತ್ರಿಗಳು ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವರಿಕೆ ಮಾಡಿದ್ದಾರೆ. ಆದರೂ ಕಾಮಗಾರಿ ನಡೆಯುತ್ತಿದೆ. ಈ ವಿಚಾರದಲ್ಲಿ ಸದನ ಕೈಗೊಳ್ಳುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಈ ವಿಷಯದಲ್ಲಿ ರಾಜಕೀಯ ಬೇಡ. ಕಾಮಗಾರಿ ನಿಲ್ಲಿಸಲು ರಾಜ್ಯ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬುದನ್ನು ತಿಳಿಸಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ಜೊತೆ ಮಾತನಾಡಲಾಗಿದೆ. ಬುಧವಾರ ಸಂಜೆ 5.30ಕ್ಕೆ ಸರ್ವಪಕ್ಷ ಸಭೆ ಕರೆಯಲಾಗಿದ್ದು ಈ ಕುರಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಅವರು ವಿಧಾನಸಭೆಗೆ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)