ಶಿರಡಿ ಸಾಯಿಬಾಬಾ ಕಣ್ಣು ತೆರೆದಿದ್ದು ಸುಳ್ಳೇಸುಳ್ಳು
ಬೆಂಗಳೂರು, ಜು. 22 : ಶಿರಡಿ ಸಾಯಿಬಾಬಾ ಒಕ್ಕಣ್ಣು ಬಿಡಿಸಿ 'ಪವಾಡ' ಮಾಡಿದ ಬಾಬು ಎಂಬವರ ಅಸಲಿ ಬಂಡವಾಗ ಈಗ ಬಯಲಾಗಿದೆ.
ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ಮೂರ್ತಿ ಸೇರಿದಂತೆ ದೇಶದೆಲ್ಲೆಡೆ ಬಾಬಾ ಎರಡು ಕಣ್ಣು ತೆರೆದೇ ಇರುವುದು ಜಗಜ್ಜಾಹೀರಾತು. ಆದರೆ, ಈ ಬಾಬು ಎಂಬುವವರು ತಮ್ಮ ಮನೆಯಲ್ಲಿದ್ದ ಸಾಯಿಬಾಬಾ ಮೂರ್ತಿಯ ಕಣ್ಣು ಮುಚ್ಚಿಸಿ ಒಕ್ಕಣ್ಣು ತೆರೆಸಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪವಾಡ ಹೇಗಾಗಿದ್ದೆಂದು ಹಿಂದೆಮುಂದೆ ಯೋಚಿಸದೇ ಬಾಬು ಎಂಬ 'ಪವಾಡ ಪುರುಷ'ನನ್ನು ನಂಬಿದ ಸಾವಿರಾರು ಜನ ಬಾಬಾ ದರ್ಶನಕ್ಕೆ ಮುಗಿಬಿದ್ದಿದ್ದರು. ಆದರೆ ಮೂರ್ತಿಯ ಹತ್ತಿರಕ್ಕೆ ಮಾಧ್ಯಮದವರನ್ನು ಸೇರಿದಂತೆ ಯಾರನ್ನೂ ಹತ್ತಿರಕ್ಕೆ ಬಿಡದ ಬಾಬು ನಡೆಸಿದ ಸಂಚು ತಿಳಿಯುತ್ತಿದ್ದಂತೆ ಮರುದಿನ ಜನಜಂಗುಳಿ ತಾನಾಗಿಯೇ ಕರಗಿತ್ತು.
ಅಸಲಿಯತ್ತೇನು? : ಒಂದು ಮೂಲದ ಪ್ರಕಾರ, ಬಾಬು ಈಗ ವಾಸಕ್ಕಿರುವ ಜಾಗ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸೇರಿದೆ, ಅಂದರೆ ಮುಜರಾಯಿ ಇಲಾಖೆ ಸೇರಿದೆ. ಸರ್ವೆ ನಂಬರ್ 56ರಲ್ಲಿರುವ 8 ಎಕರೆ ಜಾಗದಲ್ಲಿ 2 ಎಕರೆ ಜಾಗ ತಮಗೆ ಸೇರಿದ್ದೆಂದು ಗೋಸಾಯಿಮಠ ವಾದ ಹೂಡಿದೆ. ಈ ಜಾಗವನ್ನು ಹಿಂದೆ ಬಿಡಿಎ ವಶಪಡಿಸಿಕೊಂಡಿತ್ತು. ಈ ಕುರಿತಾಗಿ ಸರ್ಕಾರ ಹೂಡಿದ್ದ ದಾವೆ ಸಿವಿಲ್ ನ್ಯಾಯಾಲಯದಲ್ಲಿ ವಜಾ ಆಗಿದೆ. ಆದರೆ, ಸರ್ವೆ ನಂಬರ್ 56ರಲ್ಲಿರುವ ಜಾಗಕ್ಕೂ ಗೋಸಾಯಿಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಮತ್ತೊಂದು ವಾದ.
ಈ ಜಾಗ ಮುಜರಾಯಿ ಇಲಾಖೆಗೇ ಸೇರಿರಲಿ ಮತ್ಯಾರಿಗೇ ಸೇರಿರಲಿ ಒಂದಿಲ್ಲೊಂದು ದಿನ ಈ ಜಾಗವನ್ನು ಬಾಬು ಖಾಲಿ ಮಾಡಲೇಬೇಕು. ಬಾಬಾ ಕಣ್ಣುಬಿಟ್ಟಿರುವ ಪ್ರಹಸನ ತಾನೇ ರಚಿಸಿ ಸಾರ್ವಜನಿಕರ ಕನಿಕರ ಗಿಟ್ಟಿಸಲು ಬಾಬು ನಡೆಸಿದ ಹುನ್ನಾರ ಈಗ ಬಯಲಿಗೆ ಬಂದಿದೆ. ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುವಂತೆ ಬಾಬು ತಾವೇ ತಾವಾಗಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಗಣೇಶ ಹಾಲು ಕುಡಿಯುವ, ಕ್ರಿಸ್ತ ರಕ್ತಕಣ್ಣೀರು ಸುರಿಸುವ, ಬಾಬಾ ಕಣ್ಣು ಬಿಡುವ (ಮುಚ್ಚುವ) ಕಟ್ಟುಕಥೆಗಳು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವೆಂಬುದಕ್ಕೆ ಈ ಘಟನೆ ಪುಷ್ಟಿ ನೀಡಿದೆ.
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ
ಬಸವನಗುಡಿಯ ಮನೆಯಲ್ಲಿ ಕಣ್ತೆರೆದ ಸಾಯಿಬಾಬಾ












Click it and Unblock the Notifications