ಅಣುಬಂಧದಿಂದ ಭಾರತ ಬಲಾಢ್ಯ ರಾಷ್ಟ್ರವಾಗಲಿದೆ
ನವದೆಹಲಿ, ಜು. 22 : ಕೇಂದ್ರದ ಯುಪಿಎ ಸರ್ಕಾರ ಕೈಗೆತ್ತಿಕೊಂಡಿರುವ ನಾಗರಿಕ ಪರಮಾಣು ಒಪ್ಪಂದ ಭಾರತವನ್ನು ಮುಂದಿನ ದಿನಗಳಲ್ಲಿ ಬಲಾಢ್ಯರಾಷ್ಟ್ರ ಮಾಡುವ ಶಕ್ತಿ ಹೊಂದಿದೆ. ಈ ಒಪ್ಪಂದ ದೇಶದ ಹಿತಾಶಕ್ತಿಯ ಬದ್ಥತೆಯನ್ನು ಒಳಗೊಂಡಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಕೇಂದ್ರದ ಹಣಕಾಸು ಸಚಿವ ಪಿ.ಚಿದಂಬರಂ ಸಮರ್ಥಿಸಿಕೊಂಡರು.
ಮಂಗಳವಾರ ವಿಶ್ವಾಸಮತ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಸದನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಮೆರಿಕದೊಂದಿಗಿನ ಪರಮಾಣು ಒಪ್ಪಂದದಿಂದ ಭಾರತ ಸೂಪರ್ ರಾಷ್ಟ್ರವಾಗಲಿದೆ ಎಂದರು. ಬಿಜೆಪಿ ಮತ್ತು ಎಡಪಕ್ಷಗಳು ವಿನಾಕಾರಣ ಈ ಒಪ್ಪಂದವನ್ನು ವಿರೋಧಿಸುತ್ತಿವೆ, ಅದಕ್ಕೆ ಕಾರಣ ಏನೆಂಬುದು ಕೂಡಾ ಸ್ಪಷ್ಟಪಡಿಸಿಲ್ಲ. ಸರ್ಕಾರವನ್ನು ಸೋಲಿಸಲು ವಿರೋಧವಾಗಿದ್ದರೆ ಕ್ಷಣ ಕಾಲ ಆತ್ಮಾವಲೋಕನ ಮಾಡಿಕೊಳ್ಳಿ. ನಮ್ಮ ಮುಂದಿನ ಪೀಳಿಗೆಗೆ ನಾವು ಮೋಸ ಮಾಡಬಾರದು. ಪರಮಾಣು ಒಪ್ಪಂದಕ್ಕೆ ವಿರೋಧ ಸಲ್ಲ ಎಂದು ಮನವಿ ಮಾಡಿಕೊಂಡರು.
ಉಳಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದ ಯುಪಿಎ ಸರ್ಕಾರ ಉತ್ತಮ ಕೆಲಸ ಮಾಡಿದೆ. ಆರ್ಥಿಕ ರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದ ಚಿದಂಬರಂ, ದೇಶದ ಬೆನ್ನಲುಬಾದ ರೈತರ ಮೇಲಿದ್ದ ರು. 66 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಇದರ ಉಪಯೋಗವನ್ನು ಸುಮಾರು ಮೂರೂವರೆ ಕೋಟಿ ರೈತರು ಪಡೆದುಕೊಂಡಿದ್ದಾರೆ. ಇದರಿಂದ ಸರ್ಕಾರದ ಮೇಲೆ ಅಪಾರ ಪ್ರಮಾಣದ ಹೊರೆಬಿದ್ದರೂ ಕೂಡಾ ಲೆಕ್ಕಿಸದೇ ರೈತರ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೇವೆ.
ಈ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಆಗಿರುವ ಕೋಲಾಹಲದ ಹಿನ್ನೆಲೆಯಲ್ಲಿ ಹಣದುಬ್ಬರ ಕೈಮೀರಿದೆ. ಅದನ್ನು ತಡೆಯಲು ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೂ ಕೂಡಾ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ತಡೆಯುತ್ತೇವೆ ಎನ್ನುವ ವಿಶ್ವಾಸವಿದೆ. ಆರ್ಥಿಕ ಪ್ರಗತಿ ಮಟ್ಟವನ್ನು ಯಥಾಸ್ಥಿತಿಗೆ ತರುವ ಕೆಲಸದಿಂದ ನಾವು ಹಿಂದಕ್ಕೆ ಸರಿಯುವುದಿಲ್ಲ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ. ಭಾರತದ ಆರ್ಥಿಕ ಪ್ರಗತಿ ಪ್ರಮಾಣ ಶೇ. 9.1 ರಷ್ಟಾಗಿದೆ, ಅದರಲ್ಲಿ ಇಂಧನದ ಪಾತ್ರ ಮುಖ್ಯ ಎಂದು ಚಿದಂಬರಂ ಹೇಳಿದರು.
ಕಳೆದ ವರ್ಷ ರೈತರಿಗೆ ಉತ್ತಮವಾದ ಕಾಲ ಎಂದು ಹೇಳಬೇಕಾಗಿದೆ. 2007-08ರಲ್ಲಿ 96.43 ಮಿಲಿಯನ್ ಟನ್ ಅಕ್ಕಿ, 78.4 ಮಿಲಿಯನ್ ಟನ್ ಗೋಧಿ, 15.1 ಮಿಲಿಯನ್ ಟನ್ ಬೇಳೆ ಕಾಳುಗಳು, 28.82 ಮಿಲಿಯನ್ ಟನ್ ಎಣ್ಣೆ ಬೀಜ ಮತ್ತು 21.81 ಟನ್ ಹತ್ತಿ ಬೆಳೆಯಲಾಗಿದೆ. ಆದರಲ್ಲಿ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಚಿದಂಬರಂ ವಿವರಿಸಿದರು.
(ಏಜೆನ್ಸೀಸ್)












Click it and Unblock the Notifications