ಹೈಕೋರ್ಟ್ ಸಂಚಾರಿ ಪೀಠಗಳ ಕಲಾಪ ಶುರು
ಧಾರವಾಡ, ಜು. 7 : ಉತ್ತರ ಕರ್ನಾಟಕದ ಜನರ ಬಹುದಿನದ ಮಹತ್ವಾಕಾಂಕ್ಷೆಯ ಕನಸು ಇಂದು ಅಧಿಕೃತವಾಗಿ ಕಾರ್ಯಗತಗೊಂಡಿತು. ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಈಚೆಗೆ ಉದ್ಘಾಟನೆಗೊಂಡಿರುವ ಸಂಚಾರಿ ಹೈಕೋರ್ಟ್ ಪೀಠಗಳು ಸೋಮವಾರ ಬೆಳಗ್ಗೆ 10.30 ಗಂಟೆಗೆ ತನ್ನ ಕಾರ್ಯಕಲಾಪವನ್ನು ಆರಂಭಿಸಿದವು.
ಈ ಎರಡು ಸಂಚಾರಿ ಪೀಠಕ್ಕೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಮೊದಲ ದಿನ ಧಾರವಾಡದಲ್ಲಿ ಸುಮಾರು 200 ಪ್ರಕರಣಗಳು ವಿಚಾರಣೆಗೆ ಬರಲಿವೆ. ಗುಲ್ಬರ್ಗಾದಲ್ಲಿ ಸುಮಾರು 350 ಪ್ರಕರಣಗಳು ವಿಚಾರಣೆಗೆ ಬರಲಿವೆ. ಧಾರವಾಡ ಪೀಠಕ್ಕೆ ಧಾರವಾಡ, ಕೊಪ್ಪಳ, ಗದಗ, ಬೆಳಗಾವಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜಿಲ್ಲೆಗಳಿಗೆ 22 ಸಾವಿರಕ್ಕೂ ಅಧಿಕ ಪ್ರಕರಣಗಳು ವರ್ಗಾವಣೆಗೊಂಡಿವೆ. ಮೊದಲ ದಿನ ಒಂದು ವಿಭಾಗೀಯ ಪೀಠ ಸೇರಿದಂತೆ ಒಟ್ಟು ಐದು ನ್ಯಾಯಾಧೀಶರು 4 ನ್ಯಾಯಲಯಗಳಲ್ಲಿ ತಮ್ಮ ಕಾರ್ಯ ಆರಂಭಿಸಿದರು.
ಗುಲ್ಬರ್ಗಾ ಪೀಠಕ್ಕೆ ಗುಲ್ಬರ್ಗಾ, ಬೀದರ್, ರಾಯಚೂರು, ಮತ್ತು ಬಿಜಾಪುರ ಜಿಲ್ಲೆಗಳು ಸೇರಲಿವೆ. ಈ ಜಿಲ್ಲೆಗಳಿಗೆ ಸೇರಿರುವ ಸುಮಾರು 10.097 ಪ್ರಕರಣಗಳನ್ನು ಆಗಾಗಲೇ ಸಂಚಾರಿ ಪೀಠಕ್ಕೆ ವರ್ಗಾಯಿಸಲಾಗಿದೆ. ನಾಲ್ಕು ಕೋರ್ಟ್ ಹಾಲ್ ಗಳಲ್ಲಿ ನ್ಯಾಯದಾನದ ಪ್ರಕ್ರಿಯೆ ಆರಂಭವಾಗಿದೆ.
ಈ ಎರಡು ಪೀಠಕ್ಕೆ ವಿಚಾರಣಗೆ ಬರುವ ಪ್ರಕರಣಗಳ ಪಟ್ಟಿಯನ್ನು ಸಂಚಾರಿ ಪೀಠದ ನೋಟೀಸ್ ಬೋರ್ಡ್, ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಪ್ರಕಟಿಸಲಾಗಿದೆ. ಆ ಮಹತ್ವದ ಕ್ಷಣಕ್ಕೆ ನೂರಾರು ಜನರು ಭಾಗವಹಿಸಿದ್ದರು. ಭದ್ರತೆ ದೃಷ್ಟಿಯಿಂದ ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಗುಲ್ಬರ್ಗದಲ್ಲಿ
ನ್ಯಾಯ
ದೇಗುಲ
ಬಾಗಿಲು
ತೆರೆಯಿತು
ಹುಬ್ಬಳ್ಳಿ
ಸಂಚಾರಿ
ಪೀಠ
ಜು.7ರಿಂದ
ಕಾರ್ಯಾರಂಭ