ಕಾಗದದ ಬೆಲೆ ಏರಿಕೆಯನ್ನು ಖಂಡಿಸಿ ಮುಷ್ಕರ
ನವದೆಹಲಿ, ಜೂ. 26 : ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ದಿನೇದಿನೇ ಕಾಗದದ ಬೆಲೆ ಹೆಚ್ಚುತ್ತಿರುವುದನ್ನು ಖಂಡಿಸಿ ದಿ ಫೆಡರೇಶನ್ ಆಫ್ ಕರೂಗೇಟೆಡ್ ಬಾಕ್ಸ್ ಮ್ಯಾನುಪೆಕ್ಟರ್ ಆಫ್ ಇಂಡಿಯಾ ಮತ್ತು ಕಾನ್ಪಿಡರೇಶನ್ ಅಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘದ ವತಿಯಿಂದ ಜೂ. 29 ರಿಂದ ಜು.1ರ ವರೆಗೆ ಮೂರು ದಿನಗಳ ಕಾಲ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಸತೀಶ್ ತ್ಯಾಗಿ, ದೇಶಾದ್ಯಂತ ಸುಮಾರು 10 ಸಾವಿರ ಕಾಗದ ತಯಾರಿಕಾ ಕೈಗಾರಿಕೆಗಳಿದ್ದು, ವಿವಿಧ ತಯಾರಿಕಾ ಕಂಪನಿಗಳಿಗೆ ನಮ್ಮ ಕೈಗಾರಿಕೆಗಳಿಂದ ಕಾಗದ ಮತ್ತು ಬಾಕ್ಸ್ ಗಳನ್ನು ಒದಗಿಸುತ್ತೇವೆ. ವ್ಯವಹಾರಿಕವಾಗಿ ಆರ್ಥಿಕ ಕ್ಷೇತ್ರದಲ್ಲಿ ನಮ್ಮಕಾಣಿಕೆ ಪ್ರಮುಖವಾಗಿದೆ. ಇಷ್ಟಾದರೂ ಸರ್ಕಾರ ನಮ್ಮ ಮೇಲೆ ಬೆಲೆ ಏರಿಕೆಯಂತ ಅನಗತ್ಯ ಹೊರೆಯನ್ನು ಹೇರತೊಡಗಿದೆ. ಕ್ರಾಪ್ಟ್ ಕಾಗದದ ಬೆಲೆ ದುಬಾರಿಯಾಗಿದ್ದು, ನಮ್ಮ ಕೈಗಾರಿಕೆಗಳು ಸಂಕಷ್ಟದಲ್ಲಿ ಸಿಲುಕಿವೆ ಎಂದು ಅವರು ಕಿಡಿಕಾರಿದ್ದಾರೆ.
ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಇದರ ಬಿಸಿ ಎಲ್ಲರಿಗೂ ತಟ್ಟಲಿದೆ.ಜತೆಗೆ ಕಾಗದ ತಯಾರಿಕಾ ಕಂಪನಿಗಳು ಬೆಲೆ ಏರಿಸಿವೆ ಎಂದು ಆರೋಪಿಸುತ್ತಿರುವವರಿಗೂ ಇದು ತಿಳಿಯಲಿ.ಸರ್ಕಾರ ನಮ್ಮ ಪ್ರತಿಭಟನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಸರಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಂಪನಿಯ ಎಲ್ಲ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಠಾವಧಿ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎಂದು ತ್ಯಾಗಿ ಎಚ್ಚರಿಕೆ ನೀಡಿದ್ದಾರೆ.
(ಏಜೆನ್ಸೀಸ್)












Click it and Unblock the Notifications