ಉಗ್ರರಿಗೆ ಸುರಕ್ಷಿತ ತಾಣವಾದ ಉದ್ಯಾನನಗರಿ
ಬೆಂಗಳೂರು, ಜೂ.3 : ಬಾಂಗ್ಲಾ ಮೂಲದ ಭಯೋತ್ಪಾದನಾ ಸಂಘಟನೆಯಲ್ಲಿ ತರಬೇತಿ ಪಡೆದಿರುವ ಸುಮಾರು 20 ಕ್ಕೂ ಹೆಚ್ಚು ಉಗ್ರರು ಉದ್ಯಾನನಗರಿಯಲ್ಲಿ ಬೀಡುಬಿಟ್ಟಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ಇತ್ತೀಚೆಗೆ ದೆಹಲಿ ಪೊಲೀಸರಿಗೆ ಸೆರೆ ಸಿಕ್ಕಿರುವ ಶಂಕಿತ ಉಗ್ರ ಮಹಿಬುಲ್ಲಾ ಮಂಪರು ಪರೀಕ್ಷೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮಂಗಳವಾರ ದೆಹಲಿ ಪೊಲೀಸರು ನಡೆಸಿದ ಪರೀಕ್ಷೆಯಲ್ಲಿ ಅನೇಕ ಮಹತ್ವದ ಅಂಶಗಳನ್ನು ಬಹಿರಂಗಗೊಳಿಸಿದ ಮಹಿಬುಲ್ಲಾ, ಬಾಂಗ್ಲಾ ಮೂಲದ ಹುಜಿ ಸಂಘಟನೆಗೆ ಸೇರಿದ ಉಗ್ರರು ಬಾಂಗ್ಲಾದಲ್ಲಿ ಶಸ್ತ್ರಾಸ್ತ ತರಬೇತಿ ಪಡೆದು ಉದ್ಯಾನನಗರಿಯ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎನ್ನುವ ಕಳವಳಕಾರಿ ಸಂಗತಿ ಹೊರಗೆಡವಿದ್ದಾನೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಉಗ್ರರ ಸಂಪರ್ಕ ಹೊಂದಿರುವ ಶಂಕಿತರನ್ನು ಬಂಧಿಸಲಾಗಿದೆ. ಇದೀಗ ಬಾಂಗ್ಲಾ ಮೂಲದ ಹುಜಿ ಸಂಘಟನೆಗೆ ಸೇರಿರುವ ಸುಮಾರು 20 ಅಧಿಕ ಉಗ್ರರು ಉದ್ಯಾನ ನಗರಿಯಲ್ಲಿ ವಾಸವಾಗಿದ್ದಾರೆ. ಜನಸಾಮಾನ್ಯರ ಜತೆಗೆ ಸರಳವಾಗಿ ಜೀವಿಸುತ್ತಿರುವ ಉಗ್ರರನ್ನು ಬಂಧಿಸುವುದು ಪೊಲೀಸ್ ಇಲಾಖೆ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ.
ವಿಸಾ ಇಲ್ಲದೇ ಅನಧಿಕೃತವಾಗಿ ದೇಶದೊಳಗೆ ನುಗ್ಗುವ ಬಾಂಗ್ಲಾ ದೇಶಿಯರು ಮರಳಿ ಸ್ವದೇಶಕ್ಕೆ ತೆರಳದೆ ಭಾರತದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಕೆಲ ತಿಂಗಳು ಕಳೆದ ನಂತರ ಸ್ಥಳೀಯರಂತೆ ವಾಸಿಸಲು ಆರಂಭಿಸುತ್ತಾರೆ. ಅಂತವರನ್ನು ಕಂಡುಹಿಡಿಯುವುದು ತುಂಬಾ ಸಮಸ್ಯೆಯಾಗಿದೆ. ಸ್ಥಳೀಯರ ನೆರವಿನಿಂದ ಉಗ್ರರು ನಿರಾಂತಕವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಪೊಲೀಸರ ಅಭಿಪ್ರಾಯವಾಗಿದೆ.
ನಗರದ ಪ್ರಮುಖ ಸ್ಥಳಗಳಾದ ವಿಧಾನಸೌಧ, ಹೈಕೋರ್ಟ್, ದೇವಸ್ಥಾನ, ವಿಶ್ವೇಶ್ವರಯ್ಯ ಟವರ್, ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)