ಕಪಾಳಮೋಕ್ಷ; ಭಜ್ಜಿ ಭವಿಷ್ಯ ಡೋಲಾಯಮಾನ
ಅಹಮದಾಬಾದ್,ಮೇ 9: ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾನಾವತಿ ಸಮಿತಿ ವಿಚಾರಣೆ ನಂತರ ತೀರ್ಪನ್ನು ಕಾಯ್ದಿರಿಸಿದ್ದು, ಸಮಿತಿ ಮುಖ್ಯಸ್ಥ ಸುಧೀರ್ ನಾನಾವತಿ ಸಮಗ್ರ ವರದಿಯನ್ನು ಬಿಸಿಸಿಐಗೆ ನೀಡಿದ್ದಾರೆ.
ಐಪಿಎಲ್ನ ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದ ಹರಭಜನ್ ಸಿಂಗ್ ಇಂದು ಮತ್ತೆ ಬಿಸಿಸಿಐನಿಂದ ವಿಚಾರಣೆಗೆ ಒಳಗಾಗಿದ್ದರು. ಶ್ರೀಶಾಂತ್ ಮತ್ತು ಹರಭಜನ್ ಸಿಂಗ್ ಇಬ್ಬರು ವಿಚಾರಣೆಯಲ್ಲಿ ಭಾಗವಹಿಸಿದ್ದರು. ವಿಡಿಯೋ ಚಿತ್ರೀಕರಣ ಸೇರಿದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಸುಧೀರ್ ನಾನಾವತಿ ತಮ್ಮ ವರದಿಯನ್ನು ಬಿಸಿಸಿಐಗೆ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಪಂಜಾಬ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಎಲೆವನ್ ನಡುವೆ ನಡೆದ ಪಂದ್ಯದಲ್ಲಿ ಭಜ್ಜಿ ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರಿಕರಣ ಕುರಿತು ವಿಚಾರಣ ನಡೆಸಿದ ಐಪಿಎಲ್ ಮಂಡಳಿ ಭಜ್ಜಿಗೆ ಐಪಿಎಲ್ ನ 11 ಪಂದ್ಯಗಳಿಂದ ನಿಷೇಧ ಹೇರಿದ್ದರು.
ಈಗ ಬಿಸಿಸಿಐ ಕೂಡಾ ತೀವ್ರ ವಿಚಾರಣೆ ನಡೆಸಿದ್ದು, ಶಿಕ್ಷೆಯ ತೂಗುಕತ್ತಿ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನಲಾಗಿದೆ.ಈ ಮೊದಲು ಭಜ್ಜಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಇದೊಂದು ಸಲ ನನ್ನನ್ನು ಕ್ಷಮಿಸಿ ಎಂದು ಭಜ್ಜಿ ಬಿಸಿಸಿಐನ ಮೊರೆ ಹೋಗಿದ್ದರು. ಆದರೆ ಪ್ರಕರಣ ಗಂಭೀರವಾಗಿರುವದರಿಂದ ತನಿಖಾಧಿಕಾರಿ ಸುಧೀರ್ ನಾನಾವತಿ ಕ್ಷಮಾಪಣೆ ತಳ್ಳಿಹಾಕಿದ್ದಾರೆ ಎನ್ನಲಾಗಿದೆ. ಸಮಗ್ರವಾಗಿ ವಿಚಾರಣೆ ನಡೆಸಿದ ಸುಧೀರ್ ನಾನಾವತಿ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರಿಗೆ ವರದಿಯನ್ನು ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications