ಹೋರಾಟ ಹಿಂತೆಗೆದುಕೊಳ್ಳಲು ಚಳವಳಿಗಾರರಿಗೆ ಕೃಷ್ಣ ಮನವಿ
ಬೆಂಗಳೂರು, ಏ.5 : ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಸ್ಥಾಪನೆಯಾಗುವವರೆಗೆ ಹೊಗೇನಕಲ್ ಯೋಜನೆಯನ್ನು ತಮಿಳುನಾಡು ತಡೆಹಿಡಿದಿರುವುದರಿಂದ ಚಳವಳಿಯನ್ನು ಹಿಂತೆಗೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಕನ್ನಡಪರ ಹೋರಾಟಗಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ಯೋಜನೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ತಮಿಳುನಾಡಿನ ಪ್ರಕಟಣೆ ಬಂದನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೃಷ್ಣ, ಸದ್ಯಕ್ಕೆ ಹೊಗೇನಕಲ್ ಕಾಮಗಾರಿ ನಿಲ್ಲಿಸಲು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಕೈಗೊಂಡ ನಿರ್ಧಾರ ಸ್ವಾಗತಾರ್ಹ, ಇದು ಅವರ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತದೆ ಎಂದರು.
ಕರುಣಾನಿಧಿ ಅವರ ನಿಲುವನ್ನು ಶ್ಲಾಘಿಸಿ ಅವರೊಂದಿಗೆ ಮಾತನಾಡಿದೆ. ಇದರಿಂದ ಎರಡೂ ರಾಜ್ಯಗಳ ನಡುವೆ ಬಾಂಧವ್ಯ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಈ ಯೋಜನೆಯಿಂದ ಎರಡೂ ರಾಜ್ಯಗಳ ಮೇಲಾಗುವ ನೇರ ಪರಿಣಾಮದ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಕೃಷ್ಣ ಹೇಳಿದರು.
ಸಮಸ್ಯೆ ಉಲ್ಬಣಿಸಲು ರಾಜ್ಯದ ರಾಜಕಾರಣಿಗಳೇ ಕಾರಣ ಎಂದು ಆರೋಪಿಸಿದ್ದಕ್ಕೆ ತಮಿಳು ಚಿತ್ರನಟ ರಜನಿಕಾಂತ್ರನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ, ಇಂಥ ಆವೇಶಭರಿತ ಮಾತುಗಳು ಅಗತ್ಯವಿರಲಿಲ್ಲ ಎಂದು ನುಡಿದರು. ಇಂಥ ಮಾತುಗಳನ್ನಾಡುವ ಮೊದಲು ರಜನಿ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಈ ವಿಷಯದ ಬಗ್ಗೆ ವಿಪರೀತವಾಗಿ ಪ್ರತಿಕ್ರಿಯಿಸುವುದರಿಂದ ರಾಜ್ಯದ ಜನತೆಗೆ ಯಾವುದೇ ರೀತಿಯಿಂದಲೂ ಅನುಕೂಲವಾಗುವುದಿಲ್ಲ ಎಂದು ಬಿಜೆಪಿಯನ್ನು ನೇರವಾಗಿ ಆಕ್ಷೇಪಿಸಿದರು. ಇದು ಅವರ ಸ್ವಾರ್ಥತೆಯನ್ನು ಬಿಂಬಿಸುತ್ತದೆ ಎಂದು ಹರಿಹಾಯ್ದರು.
(ಯುಎನ್ಐ)