ನಟಿ ಭಾರತಿ ವಿಷ್ಣುವರ್ಧನ್ ರಾಜಕೀಯ ಪ್ರವೇಶ?
ಬೆಂಗಳೂರು, ಮಾ.24: ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಬಸವನಗುಡಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಆಕಾಂಕ್ಷಿಗಳ ನಡುವೆ ಪೈಪೋಟಿ ನಡೆದಿದೆ.
ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಬಿ.ಎಸ್. ಸತ್ಯನಾರಾಯಣ್ (ಕಟ್ಟೆ ಸತ್ಯ), ಬೆಂಗಳೂರು ಮಹಾನಗರಘಟಕದ ಬಿಜೆಪಿ ಅಧ್ಯಕ್ಷ ಬಿ.ಎನ್. ವಿಜಯ್ ಕುಮಾರ್, ಇತ್ತೀಚೆಗೆ ಬಿಜೆಪಿ ಸೇರಿದ ಉದಯ್ ಗರುಡಾಚಾರ್ ಅವರು ಟಿಕೆಟ್ ಬಯಸಿರುವವರಲ್ಲಿ ಪ್ರಮುಖರಾಗಿದ್ದಾರೆ. ಆದರೆ ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ. ಆದರೆ ಭಾರತಿ ವಿಷ್ಣುವರ್ಧನ್ ಅವರ ಸಮ್ಮತಿ ಇನ್ನೂ ಸಿಕ್ಕಿಲ್ಲ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬಸವನಗುಡಿ ವಿಧಾನಸಭಾ ಕ್ಷೇತ್ರವು, ಕ್ಷೇತ್ರ ಮರುವಿಂಗಡನೆಯ ಬಳಿಕವೂ ಅದೇ ಲೋಕಸಭಾ ಕ್ಷೇತ್ರದಲ್ಲೇ ಉಳಿದುಕೊಂಡಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದಾಗ ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸುತ್ತಿತ್ತು. ಲೋಕಸಭೆಗೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅನಂತಕುಮಾರ್ ಅವರನ್ನು ಕಣಕ್ಕಿಳಿಸಿ, ಬಸವನಗುಡಿ ಕ್ಷೇತ್ರದಿಂದ ಬ್ರಾಹ್ಮಣೇತರರಿಗೆ ಟಿಕೆಟ್ ನೀಡಲಾಗುತ್ತಿತ್ತು.
ಈಗಾಗಲೇ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಸಾಕಷ್ಟು ಹೆಸರುಗಳಿಸಿರುವ ಕಾಂಗ್ರೆಸ್ ನ ಮಾಜಿ ಶಾಸಕ ಕೆ. ಚಂದ್ರಶೇಖರ್ ಗೆ ಪೈಪೋಟಿ ನೀಡಲು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ.ಇದಕ್ಕೆ ತಾರಾ ವರ್ಚಸ್ಸಿನ ಭಾರತಿ ವಿಷ್ಣುವರ್ಧನ್ ಅವರನ್ನು ಕಣಕ್ಕಿಳಿಸಲು ಹಲವಾರು ಬಿಜೆಪಿ ಮುಖಂಡರು ಯೋಜಿಸಿದ್ದಾರೆ. ಈ ಮಧ್ಯೆ ಜಯನಗರದಿಂದ ಸ್ಪರ್ಧಿಸುತ್ತಿದ್ದ ವಿಜಯ್ ಕುಮಾರ್, ಮಾಜಿ ಕಾರ್ಪೊರೇಟರ್ ಕಟ್ಟೆ ಸತ್ಯ, ಈ ಕ್ಷೇತ್ರದಲ್ಲಿ ನೆಲೆಸಿರುವ ನಾಗಮಂಗಲ ತಾಲೂಕಿನವರ ಮತದ ಮೇಲೆ ಕಣ್ಣಿಟ್ಟಿರುವ ಉದಯ್ ಗರುಡಾಚಾರ್ ಅವರುಗಳು ಕೂಡ ಟಿಕೆಟ್ ಪಡೆಯಲು ಹವಣಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)