ಕನ್ನಡ ನಾಡಿನ ಯೋಧ ವಸಂತ್ ಅವರಿಗೆ ಅಶೋಕ ಚಕ್ರ
ಬೆಂಗಳೂರು, ಜ.24: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಜತೆ ಹೋರಾಡುತ್ತಾ ಮಡಿದ ಕನ್ನಡಿಗ ಯೋಧ ಕರ್ನಲ್ ವಿ. ವಸಂತ್ ಅವರಿಗೆ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ. ದಿ.ಕರ್ನಲ್ ವಸಂತ್ ಅವರಲ್ಲದೆ, ಕ್ಯಾಪ್ಟನ್ ಹರ್ಷನ್ ಆರ್ ಹಾಗೂ ಸುಬೇದಾರ್ ಚುನಿ ಅವರಿಗೂ ಅಶೋಕ ಚಕ್ರವನ್ನು ನೀಡಲಾಗುತ್ತಿದೆ.
ಕನ್ನಡಿಗ ಕರ್ನಲ್ ವಸಂತ್ ಮರಾಠಾ ಲಘು ಪದಾದಿದಳದ 9ನೇ ರೆಜಿಮೆಂಟ್ ನ ಸೇನಾನಿಯಾಗಿದ್ದರು. ಕಾಶ್ಮೀರದ ಗಡಿಯಲ್ಲಿನ ಉರಿ ಪಟ್ಟಣದಲ್ಲಿ ಐವರು ಭಯೋತ್ಪಾದಕರೊಂದಿಗೆ ಸತತ ಮೂರು ದಿನ ಹೋರಾಡಿ, ಉಗ್ರರನ್ನು ಸದೆಬಡೆದು ನಂತರ ಬಲಿದಾನ ಹೊಂದಿದ್ದರು. ಇವರಂತೆ ಕ್ಯಾಪ್ಟನ್ ಹರ್ಷನ್ ಹಾಗೂ ಸುಬೇದಾರ್ ಚುನ್ನಿ ಕೂಡ ಜಮ್ಮು ಕಾಶ್ಮೀರದ ಲೋಬಾ ಪ್ರದೇಶದಲ್ಲಿ ಉಗ್ರರನ್ನು ಸದೆಬಡೆಸುವ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ್ದರು.
ಗಣತಂತ್ರದಿನದಂದು ಕರ್ನಲ್ ವಸಂತ್ ಅವರ ಪತ್ನಿ ಸುಭಾಷಿಣಿ ಹುತಾತ್ಮ ವೀರನ ಪರವಾಗಿ ಅಶೋಕ ಚಕ್ರ ಸ್ವೀಕರಿಸಲಿದ್ದಾರೆ.ಹುತಾತ್ಮರ ನೋವಿಗೆ ಸ್ಪಂದಿಸುತ್ತಿದ್ದ ಕರ್ನಲ್ ವಸಂತ್ ದಂಪತಿಗಳು ಯುದ್ಧದಲ್ಲಿ ಮಡಿದ ಸೈನಿಕರ ಮಡದಿಯರ ಅಭ್ಯುದಯಕ್ಕಾಗಿ 'ಸೈಲೆಮ್ಟ್ ಫ್ರಂಟ್ ಎಂಬ ಸಂಘ ಕಟ್ಟಿದ್ದರು.
ಶಾರುಖ್ ಖಾನ್ ಗೆ ಫ್ರೆಂಚ್ ಸರ್ಕಾರದ ಗೌರವ
ಮುಂಬೈ:ಬಿಗ್ ಬಿ ಅಮಿತಾಬ್ ಬಚ್ಚನ್ ನಂತರ ಬಾಲಿವುಡ್ ನ ನಾಯಕ ಶಾರುಖ್ ಖಾನ್ ಅವರಿಗೆ ಫ್ರಾನ್ಸ್ ಸರ್ಕಾರದ ಉನ್ನತ ಗೌರವ ದೊರೆತಿದೆ. ಜ.27ರಂದು ಮುಂಬೈನಲ್ಲಿ ಶಾರುಖ್ ಅವರು 'ಆಫೀಸರ್ ಆಫ್ ದಿ ಆರ್ಡರ್ ಆರ್ಟ್ಸ್ ಅಂಡ್ ಲೆಟರ್ಸ್' ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಲೆ,ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಫ್ರಾನ್ಸ್ ಹಾಗೂ ವಿಶ್ವದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಗಳಿಗೆ ನೀಡಲಾಗುತ್ತದೆ. ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅಥವಾ ಫ್ರಾನ್ಸ್ ರಾಯಭಾರಿ ಜೆರೋಮ್ ಬೋನ್ನಾಫಾಂಟ್ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.(ಏಜನ್ಸೀಸ್ )












Click it and Unblock the Notifications